30 ಕೋಟಿ ರೂ. ವಂಚನೆ ಆರೋಪ; ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್ ಬಂಧನ
30 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್ ಹಾಗೂ ಅವರ ಪತ್ನಿ ಶ್ವೇತಾಂಬರಿ ಭಟ್ ಅವರನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಉದಯ್ಪುರ್ನ ಇಂದಿರಾ ಸಮೂಹ ಸಂಸ್ಥೆಗಳ ಮಾಲಕ ಡಾ. ಅಜಯ್ ಮುರ್ದಿಯಾ ನೀಡಿದ ದೂರಿನಂತೆ ಬಂಧಿಸಲಾಗಿದೆ.
ನಿರ್ಮಾಪಕ ವಿಕ್ರಂ ಭಟ್ ಹಾಗೂ ಅವರ ಪತ್ನಿ ಶ್ವೇತಾಂಬರಿ ಭಟ್ ಅನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಟ್ರಾನ್ಸಿಟ್ ರಿಮಾಂಡ್ ಅನ್ನು ಪಡೆದ ನಂತರ, ಪೊಲೀಸರು ದಂಪತಿಯನ್ನು ಉದಯ್ಪುರ್ಗೆ ಕರೆ ತರಲಿದ್ದಾರೆ. ಇದಕ್ಕೂ ಮುನ್ನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳಿಗೆ ಎರಡನೆಯ ಬಾರಿ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು. ಡಿಸೆಂಬರ್ 8ರೊಳಗೆ ಪೊಲೀಸರೆದುರು ಹಾಜರಾಗುವಂತೆ ಅವರಿಗೆಲ್ಲ ನೋಟಿಸ್ನಲ್ಲಿ ಸೂಚಿಸಲಾಗಿತ್ತು.
ಜೀವನಚಿತ್ರ ಯೋಜನೆಗೆ ಸಂಬಂಧಿಸಿದ ಪ್ರಸ್ತಾವವೊಂದರಲ್ಲಿ ನಡೆದಿದೆಯೆನ್ನಲಾದ 30 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಹಾಗೂ ಇತರ ಆರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಹಣಕಾಸು ಅವ್ಯವಹಾರಗಳನ್ನು ನಡೆಸಿದ್ದಾರೆ ಹಾಗೂ ಸುಳ್ಳು ಭರವಸೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ವಿಕ್ರಂ ಭಟ್ ಹಾಗೂ ಅವರ ಸಹಚರರ ವಿರುದ್ಧ ಇಂದಿರಾ ಐವಿಎಫ್ ಸಂಸ್ಥಾಪಕ ಡಾ. ಅಜಯ್ ಮುರ್ದಿಯಾ ಉದಯ್ಪುರ್ ಜಿಲ್ಲೆಯ ಭೂಪಾಲ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನನ್ನ ದಿವಂಗತ ಪತ್ನಿಯ ಜೀವನಾಧಾರಿತ ಚಲನಚಿತ್ರ ನಿರ್ಮಿಸಿದರೆ, ಆ ಚಿತ್ರವು ಅಂದಾಜು 200 ಕೋಟಿ ರೂ. ಲಾಭ ತಂದುಕೊಡುತ್ತದೆ ಎಂದು ನನ್ನನ್ನು ನಂಬಿಸಿ, ಹಣ ಹೂಡಿಸಲಾಗಿತ್ತು ಎಂದು ಎಫ್ಐಆರ್ನಲ್ಲಿ ಡಾ. ಅಜಯ್ ಮುರ್ದಿಯಾ ಆರೋಪಿಸಿದ್ದಾರೆ. ದೂರಿನಲ್ಲಿ ಮೆಹಬೂಬ್ ಮತ್ತು ದಿನೇಶ್ ಕಟಾರಿಯಾ ಹೆಸರುಗಳನ್ನೂ ಉಲ್ಲೇಖಿಸಲಾಗಿದೆ.