ಗೋ ಹತ್ಯೆ ನಿಷೇಧ ಕಾನೂನು ತಿದ್ದುಪಡಿಗೆ ಹೊರಟ ರಾಜ್ಯಸರಕಾರ ವಿರುದ್ಧ ವಿಹೆಚ್ಪಿ ಪ್ರತಿಭಟನೆ
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020 ಅನ್ನು ಸಡಿಲುಗೊಳಿಸಿ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರಕಾರದ ಕ್ರಮವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಉಡುಪಿಯಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ನ ಸಹ ಕಾರ್ಯದರ್ಶಿ ವಿಖ್ಯಾತ್ ಭಟ್, ಜಿಹಾದಿ ಮನಸ್ಥಿತಿಗಳಿಗೆ ಮುಖ್ಯಮಂತ್ರಿಗಳಿಗೆ ಒತ್ತಡ ಹೇರುವ ಮೂಲಕ ಗೋ ಹತ್ಯಾ ಕಾನೂನನ್ನು ಸರಳಗೊಳಿಸಲು ಮುಂದಾಗಿದ್ದಾರೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020ಯನ್ನು ಸಡಿಲಗೊಳಿಸಲು ತಿದ್ದುಪಡಿ ತರಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸುವುದಾಗಿ ತಿಳಿಸಿದರು.
ವಿಎಚ್ ಪಿ ಕರ್ನಾಟಕ ದಕ್ಷಿಣ ಪ್ರಾಂತ್ಯದ ಗೋ ರಕ್ಷಾ ಪ್ರಮುಖರಾದ ಸುನೀಲ್ ಕೆ.ಆರ್ ಮಾತನಾಡಿ, ರಾಜ್ಯದ ಎಲ್ಲ ಭಾಗಗಳಲ್ಲಿ ಗೋವುಗಳನ್ನು ಕದ್ದು ಸಾಗಾಟ ಮಾಡುವುದು ಮತ್ತು ವಧೆ ಮಾಡಿ ಅಕ್ರಮವಾಗಿ ಮಾಂಸ ಮಾರಾಟ ಮಾಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಜಿಹಾದಿಗಳು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ರಾಜ್ಯದಲ್ಲಿ ಈವರೆಗೂ ಪ್ರಬಲವಾದ ಗೋಹತ್ಯೆ ಕಾನೂನು ಜಾರಿಯಲ್ಲಿತ್ತು. ಗೋವುಗಳನ್ನು ಕದ್ದು ಸಾಗಾಟ ಮಾಡುವವರನ್ನು ಬಂಧಿಸಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಬಲ ಕಾನೂನನ್ನು ಹಿಂದಿನ ಬಿಜೆಪಿ ಸರಕಾರ ಜಾರಿಗೊಳಿಸಿತ್ತು. ಸಿದ್ದರಾಮಯ್ಯ ಸರಕಾರ ಒಂದು ವರ್ಗವನ್ನು ಓಲೈಸುವ ಉದ್ದೇಶದಿಂದ ಕಾನೂನನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ. ಗೋ ಕಳ್ಳರಿಗೆ, ಜಿಹಾದಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಗೋ ಹತ್ಯೆ ಕಾನೂನನ್ನು ಸಡಿಲಗೊಳಿಸಲು ಹೊರಟಿರುವುದು ಸಮಾಜದಲ್ಲಿ ಶಾಂತಿ ಕದಡುವ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಪರ ಸಂಘಟನೆ ಮುಖಂಡರಾದ ಮಹೇಶ್ ಶೆಣೈ ಬೈಲೂರು, ದಿನೇಶ್ ಮೆಂಡನ್, ಉಮೇಶ್ ನಾಯ್ಕ್ ಸೂಡ, ನಳಿನಿ ಪ್ರದೀಪ್, ರೇಷ್ಮಾ ಉದಯ್ ಕುಮಾರ್, ಚೇತನ್ ಪೆರಾಲ್ಕೆ, ಕರ್ವಲ್ ಶ್ರೀಕಾಂತ್ ಶೆಟ್ಟಿ, ಪೂರ್ಣಿಮಾ ಕುಯಿಲಾಡಿ ಮೊದಲಾದವರು ಭಾಗವಹಿಸಿದ್ದರು.
.jpeg)