ನಿರ್ಗತಿಕ ಮಹಿಳೆಯ ರಕ್ಷಣೆ: ಶ್ರೀಕೃಷ್ಣಮಠದಲ್ಲಿ ಆಶ್ರಯ, ಉದ್ಯೋಗ ವ್ಯವಸ್ಥೆ
Monday, June 08, 2026
ಉಡುಪಿಯ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಅಲೆದಾಡುತ್ತಿದ್ದ ಮಹಿಳೆಯೊಬ್ಬರನ್ನು ಅಕ್ಕಪಡೆಯ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಉಡುಪಿಯ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಅಲೆದಾಡುತ್ತಿದ್ದ ಮಹಿಳೆಯ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಅಕ್ಕಪಡೆ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಮಹಿಳೆಗೆ ಸುರಕ್ಷತೆ ಹಾಗೂ ಆಶ್ರಯದ ದೃಷ್ಟಿಯಿಂದ ಮಹಿಳಾ ನಿಲಯದಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವುದಾಗಿ ಅಕ್ಕಪಡೆ ಸಿಬ್ಬಂದಿಗಳು ತಿಳಿಸಿದರೂ, ಆಕೆ ಅದಕ್ಕೆ ಒಪ್ಪದೆ ತನಗೆ ಯಾವುದಾದರೂ ಉದ್ಯೋಗ ದೊರಕಿಸಿಕೊಡಬೇಕೆಂದು ಮನವಿ ಮಾಡಿಕೊಂಡರು.
ಮಹಿಳೆಯ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಅಕ್ಕಪಡೆಯ ಸಿಬ್ಬಂದಿಗಳು ಉಡುಪಿ ಕೃಷ್ಣಮಠದ ಆಡಳಿತ ಕಚೇರಿಯನ್ನು ಸಂಪರ್ಕಿಸಿ ಮಹಿಳೆಯ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ಮಾನವೀಯ ಸ್ಪಂದನೆ ತೋರಿದ ಕೃಷ್ಣಮಠದ ಆಡಳಿತ ಮಂಡಳಿಯವರು ಮಹಿಳೆಗೆ ಆಶ್ರಯ ಹಾಗೂ ಉದ್ಯೋಗದ ವ್ಯವಸ್ಥೆಯನ್ನು ಕಲ್ಪಿಸಿದರು.
ಸಂಕಷ್ಟದಲ್ಲಿದ್ದ ಮಹಿಳೆಯೊಬ್ಬರಿಗೆ ಸುರಕ್ಷಿತ ಜೀವನ ಹಾಗೂ ಸ್ವಾವಲಂಬನೆಯ ದಾರಿ ಕಲ್ಪಿಸುವಲ್ಲಿ ಅಕ್ಕಪಡೆ ಮತ್ತು ಕೃಷ್ಣಮಠದ ಆಡಳಿತದ ಸಹಕಾರಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.