ಉದ್ಯಾವರದಲ್ಲಿ 'ನಿರಂತರ್ ಬಹುಭಾಷಾ ಸಿನಿಮಾ ಉತ್ಸವ–2026' ಪೋಸ್ಟರ್ ಬಿಡುಗಡೆ
Wednesday, July 22, 2026
ಕಲೆ, ಸಾಹಿತ್ಯ, ನಾಟಕ, ಸಂಗೀತ ಹಾಗೂ ಸಿನಿಮಾಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿರುವ ನಿರಂತರ್ ಉದ್ಯಾವರ ಸಂಸ್ಥೆಯ ಆಶ್ರಯದಲ್ಲಿ ಜುಲೈ 31ರಿಂದ ಆಗಸ್ಟ್ 2ರವರೆಗೆ ನಡೆಯಲಿರುವ 'ನಿರಂತರ್ ಬಹುಭಾಷಾ ಸಿನಿಮಾ ಉತ್ಸವ–2026'ರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಬಲಾಯಿಪಾದೆ ಶ್ರೀ ನಾರಾಯಣ ಗುರು ಯುವ ವೇದಿಕೆ ಉದ್ಯಾನವನದಲ್ಲಿ ನಡೆಯಿತು.
ವಿವಿಧ ಧರ್ಮಗಳ ಸಾಮಾಜಿಕ ಮುಖಂಡರುಗಳು ಜಂಟಿಯಾಗಿ ಉತ್ಸವದ ಪೋಸ್ಟರ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಶ್ರೀ ನಾರಾಯಣ ಗುರು ಯುವ ವೇದಿಕೆಯ ಗೌರವಾಧ್ಯಕ್ಷ ಸದಾಶಿವ ಕಟ್ಟೆಗುಡ್ಡೆ, ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯೊಂದಿಗೆ ನಿರ್ಮಾಣವಾಗುತ್ತಿರುವ ಇಂತಹ ಸಿನಿಮಾಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಮತ್ತು ಹೊಸ ಚಿಂತನೆಗೆ ಪ್ರೇರಣೆಯಾಗುತ್ತವೆ. ಶ್ರೀ ನಾರಾಯಣ ಗುರುಗಳ ಚಿಂತನೆಗಳಂತೆ ಸಮಾಜ ನಿರ್ಮಾಣದ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿ, ಸಿನಿಮಾ ಉತ್ಸವಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಡುಪಿ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ರೋಯ್ಸ್ ಫೆರ್ನಾಂಡಿಸ್, ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಉಡುಪಿ ಸಿಂಡಿಕೇಟ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ವ್ಯವಸ್ಥಾಪಕ ಜೀವನ್ ಡಿಸೋಜಾ, ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ಕಾರ್ಯದರ್ಶಿ ಜೋನ್ ಗೋಮ್ಸ್, ಕೋಶಾಧಿಕಾರಿ ವಿಲ್ಫ್ರೆಡ್ ಡಿಸೋಜಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಿರಂತರ್ ಉದ್ಯಾವರ ಅಧ್ಯಕ್ಷ ರೋಷನ್ ಕ್ರಾಸ್ಟೋ ಸ್ವಾಗತಿಸಿದರು. ರೊನಾಲ್ಡ್ ಡಿಸೋಜಾ ವಂದಿಸಿದರು. ಸಂಸ್ಥೆಯ ಸ್ಥಾಪಕ ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು. ಮೂರು ದಿನಗಳ ಸಿನಿಮಾ ಉತ್ಸವದ ವೇಳಾಪಟ್ಟಿ: ಜುಲೈ 31 (ಶುಕ್ರವಾರ): ಸೂತನ್ ಗೌಡ ರಚಿಸಿ ನಿರ್ದೇಶಿಸಿರುವ ಕನ್ನಡ ಸಿನಿಮಾ 'ವಲವಾರ' ಆಗಸ್ಟ್ 1 (ಶನಿವಾರ): ಅನೀಶ್ ಪೂಜಾರಿ ವೇಣೂರು ರಚಿಸಿ ನಿರ್ದೇಶಿಸಿರುವ ತುಳು ಸಿನಿಮಾ 'ದಸ್ಕತ್' ಆಗಸ್ಟ್ 2 (ಭಾನುವಾರ): ಸ್ಟ್ಯಾನಿ ಬೆಳಾ ರಚಿಸಿ ನಿರ್ದೇಶಿಸಿರುವ ಕೊಂಕಣಿ ಸಿನಿಮಾ 'ಬಾಪಾಚೆ ಪುತಾಚೆ ನಾಂವಿಂ'.
ಈ ಮೂರು ಚಿತ್ರಗಳ ಪ್ರದರ್ಶನವು ಪ್ರತಿದಿನ ಸಂಜೆ 6.30 ಗಂಟೆಗೆ ಉದ್ಯಾವರ ಗುಡ್ಡೆಅಂಗಡಿಯಲ್ಲಿರುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಆವರಣದ ಕ್ಸೇವಿಯರ್ ಸಭಾಭವನದಲ್ಲಿ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.