ಮೇ 14- 19: ಕೊಡವೂರು ಶಂಕರನಾರಾಯಣ ಸನ್ನಿಧಾನದಲ್ಲಿ ಮಹಾರುದ್ರಯಾಗ
ಕೊಡವೂರಿನ ಮಹತೋಭಾರ ಶ್ರೀ ಶಂಕರನಾರಾಯಣ ಸನ್ನಿಧಾನದಲ್ಲಿ ಅಪರೂಪದ ಮಹಾ ರುದ್ರಯಾಗ ಮೇ 14ರಿಂದ ಆರಂಭವಾಗಿ ಮೇ 19ರಂದು ಸಂಪನ್ನಗೊಳ್ಳಲಿದೆ. ಶ್ರೀ ಶಂಕರನಾರಯಣ ದೇವಸ್ಥಾನದ ಪರಮ ಭಕ್ತರು ಅಗಿರುವ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ, ಲೋಕ ಕಲ್ಯಾಣಾರ್ಥ ನಾಡಿನ ಜನರ ಸುಭೀಕ್ಷೆಗಾಗಿ ಮಹಾ ರುದ್ರ ಯಾಗ ಹಮ್ಮಿಕೊಳ್ಳಲಾಗಿದೆ.
ಕೊಡವೂರು ದೇವಸ್ಥಾನದಲ್ಲಿ ಮಹಾರುದ್ರ ಯಾಗದ ಲೋಗೋ ಅನ್ನು ಮಹಾ ರುದ್ರಯಾಗ ಸಮಿತಿ ಕಾರ್ಯಧ್ಯಕ್ಷ ಹಾಗೂ ಸೇವಾಕರ್ತರಾದ ಪ್ರಸಾದ್ ರಾಜ್ ಕಾಂಚನ್ ಅನಾವರಣಗೊಳಿಸಿದರು. ಮೇ 14ರಿಂದ ಮೇ 19ರವರೆಗೆ ಕೊಡವೂರಿನ ಪುಣ್ಯ ನೆಲದಲ್ಲಿ ಹಮ್ಮಿಕೊಳ್ಳಲಾದ ಈ ಪುಣ್ಯ ಕಾರ್ಯದ ಸಂದರ್ಭ ವಿವಿಧ ಧಾರ್ಮಿಕ, ಮನರಂಜನೆ, ಕ್ರೀಡೋತ್ಸವ, ಅರೋಗ್ಯ ಶಿಬಿರ, ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಮಹಾರುದ್ರ ಯಾಗದ ಸುಸಂಧರ್ಭ ವನ್ನು ನಾಡ ಹಬ್ಬದಂತೆ ಅಚರಿಸಲು ನಿರ್ಧರಿಸಿದ್ದೇವೆ. ಮೇ 10ರಿಂದ ಮೇ 20ರವರೆಗೆ ಸರ್ವರ ಮನೋರಂಜನೆಗಾಗಿ ಜಯಂಟ್ ವ್ಹೀಲ್, ಮೋಜು ಮಸ್ತಿಗಳು, ಆಟಿಕೆಗಳು, ಆಟೋಟ ಪರಿಕರಗಳು, ಬೃಹತ್ತ್ ವಸ್ತು ಪ್ರದರ್ಶನ ಮಾರಾಟ ಮಳಿಗೆಗಳು ಮನರಂಜಿಸಲಿವೆ.
ಮೇ 14ರಂದು ಮಹಾರುದ್ರ ಯಾಗದ ಪೂರ್ವಭಾವಿಯಾಗಿ ಮಲ್ಪೆಯಿಂದ ಕೊಡವೂರು ಮಹತೋಭಾರ ಶಂಕರನಾರಯಣ ದೇವಸ್ಥಾನದವರೆಗೆ ಭವ್ಯ ಹೊರೆಕಾಣಿಕೆ ಮೆರವಣಿಗೆಯು ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿರುವುದು.
ಮೇ 15ರಂದು ಮಹಾ ರುದ್ರ ಯಾಗ, ಗಣ ಯಾಗ ಧಾರ್ಮಿಕ ವಿಧಿವಿಧಾನಗಳು ಅರಂಭಗೊಳ್ಳಲಿರುವುದು. ಅದೇ ಸಂಜೆ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.
ಮೇ 16ರಂದು ಸರ್ವರಿಗೂ ಆರೋಗ್ಯ ಭಾಗ್ಯದ ಪರಿಕಲ್ಪನೆಯಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಮೇ 17ರಂದು ಮಲ್ಪೆ ಬೀಚ್ ನಲ್ಲಿ ವಿವಿಧ ಸಾಂಪ್ರದಾಯಿಕ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಅಂದು ಸಂಜೆ 6 ಗಂಟೆಗೆ ಮಲ್ಪೆ ಕಡಲ ತೀರದಲ್ಲಿ ವಾರಣಾಸಿಯ ಪುರೋಹಿತರಿಂದ ಗಂಗಾರತಿ ಯನ್ನು ನೋಡಿ ಪುನೀತರಾಗುವ ಭಾಗ್ಯ ಭಕ್ತ ಜನತೆಗೆ ಲಭಿಸಲಿದೆ. ಈ ಕಾರ್ಯಕ್ರಮಕ್ಕೆ ನಾಡಿನ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ.
ರಾತ್ರಿ 8 ಗಂಟೆಗೆ ದಕ್ಷಿಣ ಭಾರತದ ಪ್ರಖ್ಯಾತ ಕಲಾವಿದೆ ಮಂಗ್ಲಿ ಅವರು ತಮ್ಮ ಅದ್ಭುತ ಶಿವಗಾನಾಮೃತದಿಂದ ಕಲಾಭಿಮಾನಿಗಳನ್ನು, ಭಕ್ತ ಜನತೆಯನ್ನು ಭಕ್ತಿ ಸಾಗರದಲ್ಲಿ ಪುನೀತಗೊಳಿಸಲಿದ್ದಾರೆ.
ಮೇ 18ರಂದು ನಡೆಯಲಿರುವ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, ದೇಶದ ಮೂಲೆ ಮೂಲೆಗಳಿಂದ ವಿವಿಧ ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ನಾಡಿನ ಯುವ ಉದ್ಯೋಗಕಾಂಕ್ಷಿಗಳು ಭಾಗವಹಿಸುವಂತೆ ಮನವಿ ಮಾಡುತ್ತಿದ್ದೇವೆ.
ಮೇ 19 ರಂದು ಮಹಾ ರುದ್ರ ಯಾಗ ಕೊನೆಯ ದಿನದಂದು ಪೂರ್ಣಾಹುತಿ. ಇನ್ನೂ ವಿಶೇಷವಾಗಿ ಸ್ಥಳೀಯ ಕಲಾವಿದರುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ,ವಸ್ತು ಪ್ರದರ್ಶನ ನಡೆಯುವ ವೇದಿಕೆಯಲ್ಲಿ "ಪ್ರತಿಭೆ ನಿಮ್ಮದು ವೇದಿಕೆ ನಮ್ಮದು" ಎನ್ನುವ ಕಾರ್ಯಕ್ರಮ ಅಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸ ಬಹುದಾಗಿದೆ. ಕಾರ್ಯಕ್ರಮ ಪ್ರತಿದಿನ 5ರಿಂದ 8ರವರೆಗೆ ನಡೆಯಲಿದೆ. ಅಸಕ್ತರು ಮಹಾ ರುದ್ರ ಯಾಗ ಸಮಿತಿ ಕಚೇರಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಈ ಐದು ದಿನಗಳ ಕಾಲ ಮಹಾರುದ್ರ ಯಾಗ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಡಿನ ಪ್ರಖ್ಯಾತ ಕಲಾವಿದರುಗಳಿಂದ ಪ್ರತಿ ನಿತ್ಯ ನಡೆಯಲಿದೆ.
ಅಷ್ಟೇ ಅಲ್ಲದೇ ಪರಮ ಶಿವನ ಮಹಾ ಯಾಗದ ಪುಣ್ಯೋದಯಕ್ಕೆ ಅಗಮಿಸುವ ಭಕ್ತರಿಗೆ ಪ್ರತಿದಿನ ಅನ್ನ ಪ್ರಸಾದದ ವೆವಸ್ಥೆಯನ್ನು ಕೂಡ ಮಾಡಲಾಗಿದೆ. ವಿಶೇಷ ವಾಗಿ ಐದು ಸಾವಿರ ಮಹಿಳೆಯರಿಗೆ ಮಹಾ ರುದ್ರ ಯಾಗ ಸಂಕಲ್ಪದೊಂದಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಅಸಕ್ತರು ಮಹಾ ರುದ್ರ ಯಾಗ ಸಮಿತಿ ಕಚೇರಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಈ ವೇಳೆ ಕೊಡವೂರು ಶ್ರೀ ಶಂಕರನಾರಯಣ ದೇವಸ್ಥಾನದ ತಂತ್ರಿ ವೇದಮೂರ್ತಿ ವಾದಿರಾಜ ತಂತ್ರಿ, ಬಾಲಕೃಷ್ಣ ಕೊಡವೂರು, ಧನಂಜಯ ಮಲ್ಪೆ, ರಮೇಶ್ ತಿಂಗಳಾಯ, ವಾದಿರಾಜ್ ಸಾಲಿಯಾನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಕೊಡವೂರು, ಡಾ. ವಿಜಯೇಂದ್ರ ಮೊದಲಾದವ್ರು ಉಪಸ್ಥಿತರಿದ್ದರು.

