ಕೆಮ್ತೂರಿನಲ್ಲಿ ಹೈಟೆನ್ಶನ್ ವಿದ್ಯುತ್ ತಂತಿ ಮೇಲೆ ಬಿದ್ದ ಮರದ ಗೆಲ್ಲು; ವಿದ್ಯುತ್ ಸಂಪರ್ಕ ಕಡಿತ
Friday, September 04, 2026
ಅಲೆವೂರು ಸಮೀಪದ ಕೆಮ್ತೂರಿನಲ್ಲಿ ಅಶ್ವತ್ಥ ಮರದ ಬೃಹತ್ ಗೆಲ್ಲೊಂದು ಹೈಟೆನ್ಶನ್ ವಿದ್ಯುತ್ ತಂತಿಯ ಮೇಲೆ ಬಿದ್ದು, ಪರಿಸರದ ಹಲವು ಮನೆಗಳಿಗೆ ವಿದ್ಯುತ್ ಸರಬರಾಜು ಕಡಿತಗೊಂಡ ಘಟನೆ ಶುಕ್ರವಾರ ನಡೆದಿದೆ.
ಕೆಮ್ತೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ರಸ್ತೆಯ ಶಶಿಕಾಂತ್ ಭಟ್ ಅವರ ಮನೆ ಪಕ್ಕದಲ್ಲಿರುವ ನಾಗಬನದ ಬಳಿಯ ಬೃಹತ್ ಅಶ್ವತ್ಥ ಮರದ ಗೆಲ್ಲು ಮುರಿದು ರಸ್ತೆಗೆ ಬಿದ್ದಿದೆ. ಮರದ ಗೆಲ್ಲು ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೂ ತೊಂದರೆಯಾಯಿತು.
ಘಟನೆಯಿಂದ ಹೈಟೆನ್ಶನ್ ವಿದ್ಯುತ್ ತಂತಿಯ ಮೇಲೂ ಮರದ ಗೆಲ್ಲು ಬಿದ್ದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪರಿಸರದ ಮನೆಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಸ್ಥಳೀಯರು ಕೂಡಲೇ ಕಾರ್ಯಪ್ರವೃತ್ತರಾಗಿ ರಸ್ತೆಗೆ ಬಿದ್ದಿರುವ ಮರದ ಗೆಲ್ಲನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ.