ಇಂದ್ರಾಳಿಯಲ್ಲಿ ಇಂಡಿಯನ್ ಆಯಿಲ್, ಕೆಎಂಸಿ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
Thursday, September 03, 2026
ಇಂದ್ರಾಳಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ನ ಸಹಯೋಗದಲ್ಲಿ ಕೆಎಂಸಿ ಮಣಿಪಾಲದ ನೇತ್ರ ವಿಭಾಗದ ತಜ್ಞ ವೈದ್ಯರ ತಂಡದೊಂದಿಗೆ ಸಾರ್ವಜನಿಕರು ಹಾಗೂ ಗ್ರಾಹಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇಂದ್ರಾಳಿಯ ಶ್ರೀಕೃಷ್ಣ ಪೆಟ್ರೋಲಿಯಂನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಯಮಿ ಅಮ್ಮುಂಜೆ ವಸಂತ್ ನಾಯಕ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯುದ್ಧದ ಸಂದರ್ಭಗಳಲ್ಲಿ ದೇಶದ ತುರ್ತು ಅಗತ್ಯಗಳನ್ನು ಪೂರೈಸಲು ಸಹಕಾರಿಯಾಗುವಂತೆ ಎಸ್. ನಿಜಲಿಂಗಪ್ಪ ಅವರ ನೇತೃತ್ವದಲ್ಲಿ ಆರಂಭಗೊಂಡ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಇಂದು ದೇಶಾದ್ಯಂತ ಸುಮಾರು 42,000 ತೈಲ ಪಂಪ್ಗಳ ಮೂಲಕ ದೇಶವಾಸಿಗಳಿಗೆ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ. ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಇಂಡಿಯನ್ ಆಯಿಲ್ ಉಡುಪಿ ಇದರ ಸೇಲ್ಸ್ ಆಫೀಸರ್ ಅಭಿಷೇಕ್ ಸಿಂಗ್, ಡಾ. ಶರ್ಮಿನ್ ಕುಮಾರಿ, ಡಾ ಕುಮಾರಿ ರಶ್ಮಿಕಾ, ಇಂಡಿಯನ್ ಆಯಿಲ್ ಡೀಲರ್ಗಳಾದ ಹರೀಶ್ ಕಿಣಿ ಮತ್ತು ಲೋಕೇಶ್, ಸಂಧ್ಯಾ ಲಕ್ಷ್ಮೀಕಾಂತ್, ಕೆಎಂಸಿ ಮಣಿಪಾಲದ ನೇತ್ರ ವಿಭಾಗದ ಡಾ. ಮಾಧವ್ ಶ್ರೀಕೃಷ್ಣ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು. ಪೆಟ್ರೋಲಿಯಂನ ಮಾಲೀಕರಾದ ಲಕ್ಷ್ಮೀಕಾಂತ್ ಬೆಸ್ಕೂರು ಸ್ವಾಗತಿಸಿದರು.
ಶಿಬಿರದಲ್ಲಿ ರಕ್ತದೊತ್ತಡ (HTN), ಮಧುಮೇಹ, ನೇತ್ರ ತಪಾಸಣೆ, ಕ್ಷಯರೋಗ (TB) ಹಾಗೂ ಮಲೇರಿಯಾ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ತಪಾಸಣೆ ಹಾಗೂ ಆರೋಗ್ಯ ಸಲಹೆಗಳನ್ನು ನೀಡಲಾಯಿತು. ಸಾರ್ವಜನಿಕರು ಮತ್ತು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.
