ನೀರಿಗೆ ಕೊರೆದ ಬೋರ್ವೆಲ್ನಲ್ಲಿ ಗ್ಯಾಸ್: ಕೇರಳದ ಕುಟುಂಬಕ್ಕೆ ಎಲ್ಪಿಜಿ ಬೇಕಾಗಿಲ್ಲ..!
ಮಧ್ಯಪ್ರಾಚ್ಯ ದೇಶದಲ್ಲಿ ಉಂಟಾಗಿರುವ ಯುದ್ಧದಿಂದಾಗಿ ದೇಶದೆಲ್ಲೆಡೆ ಅಡುಗೆ ಅನಿಲದ ಕೊರತೆ ತಲೆದೋರಿದೆ. ಗ್ಯಾಸ್ ಗೆ ಪರ್ಯಾಯವಾಗಿ ಕಟ್ಟಿಗೆ ಒಲೆಯ ಮೊರೆ ಹೋದವರು ಹಲವು ಜನರು. ಆದರೆ ಕೇರಳದ ಆಲಪ್ಪುವಿನ ಆರಾಟ್ಟುಮಾರ್ಗದ ರತ್ನಮ್ಮ ಕುಟುಂಬಕ್ಕೆ ಗ್ಯಾಸ್ ಕೊರತೆಯ ಚಿಂತೆ ಇಲ್ಲ. ಕಾರಣ ಕಳೆದ 11 ವರ್ಷಗಳಿಂದಲೂ ಪ್ರಕೃತಿದತ್ತವಾಗಿ ಸಿಗುವ ಅಡುಗೆ ಅನಿಲವನ್ನೇ ಈ ಕುಟುಂಬ ಬಳಸುತ್ತಿದೆ.
ರತ್ನಮ್ಮ ಅವರ ಕುಟುಂಬವು 2011ರಲ್ಲಿ ಕುಡಿಯುವ ನೀರಿಗಾಗಿ ತಮ್ಮ ಹಿತ್ತಲಿನಲ್ಲಿ ಸುಮಾರು 75 ಅಡಿಗಳಷ್ಟು ಆಳದ ಬೋರ್ವೆಲ್ ಕೊರೆಸಿದ್ದರು. ಆದರೆ ನೀರು ಸಿಗದ ಕಾರಣ ಅದನ್ನು ಮುಚ್ಚಲು ನಿರ್ಧರಿಸಲಾಯಿತು. ಆ ಸಮಯದಲ್ಲಿ ಪ್ಲಂಬರ್ ಒಬ್ಬರು ಬೆಂಕಿಪೆಟ್ಟಿಗೆ ಗೀರಿದಾಗ ಬೋರ್ವೆಲ್ನಿಂದ ಜ್ವಾಲೆ ಹೊರಬಂದು ಎಲ್ಲರನ್ನೂ ಅಚ್ಚರಿಗೊಳಿಸಿತು.
ಕಳೆದ ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ರತ್ನಮ್ಮ ಅವರು ಇದೇ ಅನಿಲವನ್ನು ಪೈಪ್ಗಳ ಮೂಲಕ ತಮ್ಮ ಅಡುಗೆಮನೆಗೆ ಸಂಪರ್ಕಿಸಿ ಆಹಾರ ತಯಾರಿಸಲು ಬಳಸುತ್ತಿದ್ದಾರೆ. ಇದರಿಂದಾಗಿ ಅವರಿಗೆ ವರ್ಷಕ್ಕೆ ಸುಮಾರು 10,000 ವರೆಗೆ ಎಲ್ಪಿಜಿ ವೆಚ್ಚ ಉಳಿತಾಯವಾಗುತ್ತಿದೆ ಎಂದು ಅಂದಾಜಿಸಲಾಗಿದೆ.
ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಓಎನ್ಜಿಸಿ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಅಲ್ಲಿ ಅನಿಲ ಇರುವುದು ದೃಢಪಟ್ಟಿದ್ದರೂ, ದೊಡ್ಡ ಮಟ್ಟದ ಭೂಗತ ನಿಕ್ಷೇಪಗಳ ಬಗ್ಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ.
ಭೂವಿಜ್ಞಾನಿಗಳು ಮತ್ತು ತಜ್ಞರು ಈ ಅನಿಲವನ್ನು ಮೀಥೇನ್ ಎಂದು ಗುರುತಿಸಿದ್ದಾರೆ. ಕರಾವಳಿ ತೀರದ ಜೌಗು ಪ್ರದೇಶಗಳಲ್ಲಿ ಸಾವಯವ ವಸ್ತುಗಳ ಕೊಳೆಯುವಿಕೆಯಿಂದಾಗಿ ಇಂತಹ ಅನಿಲ ಉತ್ಪತ್ತಿಯಾಗುವುದು ಸಾಮಾನ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಂಧನ ಬೆಲೆ ಏರಿಕೆಯ ನಡುವೆಯೂ ರತ್ನಮ್ಮ ಅವರ ಕುಟುಂಬವು ಈ ನೈಸರ್ಗಿಕ ಅನಿಲದ ಮೂಲದಿಂದಾಗಿ ಎಲ್ಪಿಜಿ ಸಿಲಿಂಡರ್ ಅವಲಂಬನೆಯಿಲ್ಲದೆ ನೆಮ್ಮದಿಯಿಂದ ಅಡುಗೆ ಮಾಡುತ್ತಿದೆ.