ವೈಯಕ್ತಿಕ ದ್ವೇಷದಿಂದ ಶಾಸಕ ಯಶ್ಪಾಲ್ ಅವರಿಂದ ಉದ್ಯಮಕ್ಕೂ ಅಡ್ಡಗಾಲು: ಮಾಜಿ ಶಾಸಕ ರಘುಪತಿ ಭಟ್ ಆರೋಪ
ಉಡುಪಿಯ ಬಡನಿಡಿಯೂರು ಗ್ರಾಮದ ಕಡಲ ತೀರದಲ್ಲಿ ರೆಸಾರ್ಟ್ ನಿರ್ಮಿಸಲು ಕಾನೂನಿನಲ್ಲಿ ಯಾವುದೇ ತೊಡಕಿಲ್ಲದೇ ಇದ್ದರೂ ವೈಯಕ್ತಿಕ ದ್ವೇಷದಿಂದ ಶಾಸಕ ಯಶ್ಪಾಲ್ ಸುವರ್ಣ ಅವರು ರೆಸಾರ್ಟ್ ನಿರ್ಮಾಣಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ.
ಉಡುಪಿಯ ಅವರ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜಕಾರಣಿಗಿಂತ ಮೊದಲು ನಾನು ಉದ್ಯಮಿ. ರಾಜಕೀಯ ನನ್ನ ವೃತ್ತಿಯಲ್ಲ ಪ್ರವೃತ್ತಿ. ಹೋಟೆಲ್ ಉದ್ಯಮ ನಡೆಸಿಕೊಂಡು ಪ್ರವಾಸೋದ್ಯಮ ಬೆಳೆಸುವ ಉದ್ದೇಶದಿಂದ ಕಡಲ ತೀರದಲ್ಲಿ 1.60 ಎಕರೆ ಜಾಗದಲ್ಲಿ ರೆಸಾರ್ಟ್ ಮಾಡಲು ಹೊರಟಿದ್ದೆ. ಅನುಮತಿ ಕೂಡ ಪಡೆದಿದ್ದೆ. ಸಿಂಗಲ್ ಲೇ ಔಟ್ ಗೆ 2 ವರ್ಷಗಳಿಂದ ಅರ್ಜಿ ಹಾಕಿದರೂ ಈ ವರೆಗೂ ಸಿಕ್ಕಿಲ್ಲ. ಇದಕ್ಕೆ ಹೈಕೋರ್ಟ್ ಮೊರೆ ಹೋದರೂ ಬೇರೆ ಬೇರೆ ಕಾರಣ ನೀಡಿ ನಿರಾಕರಿಸಿದರು. ಆದರೆ ಫೆ. 20 ರಂದು ಸಿಂಗಲ್ ಲೇ ಔಟ್ ನೀಡಲು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬಂದಿದೆ . ಆದರೆ ಒಂದು ತಿಂಗಳಾದರೂ ಈ ವರೆಗೆ ಅನುಮತಿ ಪತ್ರ ಕೊಡುತ್ತಿಲ್ಲ. ಮೂರು ಬಾರಿ ಶಾಸಕನಾಗಿದ್ದ ಸಮಯದಲ್ಲಿ ಯಾರಿಗೆ ಸಮಸ್ಯೆಯಾದರೂ ಜಾತಿ ಧರ್ಮ ಮರೆತು ಸ್ಪಂದಿಸಿದ್ದೇನೆ. ಆದರೆ ಈಗ ನನಗೆ ಸಮಸ್ಯಯಾಗುತ್ತಿದೆ. ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ವೈಯಕ್ತಿಕ ದ್ವೇಷಕ್ಕಾಗಿ 24 ತಿಂಗಳಿನಿಂದ ತೊಂದರೆಯನ್ನುಂಟು ಮಾಡುತ್ತಿದ್ದಾರೆ.
ಶಾಸಕ ಯಶ್ ಪಾಲ್ ಸುವರ್ಣ ಅವರು ವೈಯಕ್ತಿಕ ದ್ವೇಷದಿಂದ ರೆಸಾರ್ಟ್ ನಿರ್ಮಾಣಕ್ಕೆ ತೊಂದರೆ ಮಾಡುತ್ತಿದ್ದರು ಕೂಡ ಜಿಲ್ಲಾಡಳಿತವು ಸುಮ್ಮನಿದೆ. ಕೋರ್ಟ್ ಆದೇಶಕ್ಕೂ ಬೆಲೆ ಇಲ್ಲ. ನಗರಾಭಿವೃದ್ಧಿ ಆಯುಕ್ತರು ರೌಡಿಸಂ ಗೆ ಬೆದರುತ್ತಿದ್ದಾರೆ ಎಂದು ಆರೋಪಿಸಿದರು.
ಮಾರ್ಚ್ 23 ರಂದು ಬೆಳಗ್ಗೆ 9.30ಗಂಟೆಯಿಂದ ಸಂಜೆ 6 ಗಂಟೆಗೆವರೆಗೆ ನಗರಾಭಿವೃದ್ಧಿ ಪ್ರಾಧಿಕಾರದ ಎದುರು ಸಾತ್ವಿಕ ಪ್ರತಿಭಟನೆ ನಡೆಸುವುದಾಗಿ ಹೇಳಿದರು. ನ್ಯಾಯ ಸಿಗುವರೆಗೂ ಹೋರಾಟ ಮುಂದುವರಿಸುವುದಾಗಿ ಹೇಳಿದ ರಘುಪತಿ ಭಟ್, ಸಿಂಗಲ್ ಲೇ ಔಟ್ ಕೊಡಬೇಕು. ಕೊಡುವುದಿಲ್ಲ ಎಂದಾದರೆ ಹಿಂಬರಹ ಆದರೂ ಕೊಡಲಿ. ಹಿಂಬರಹ ಕೊಟ್ಟರೆ ಧರಣಿ ಕೈಬಿಟ್ಟು ಕಾನೂನಿನ ಮೊರೆ ಹೋಗುವುದಾಗಿ ಹೇಳಿದರು.