ದೇವಿ ಮಹಾತ್ಮೆ ಸಿನಿಮಾ: ಗ್ರೀಸ್ ಸರಕಾರದಿಂದ 150ಕೋಟಿ ರೂ. ಅನುದಾನ
Wednesday, April 29, 2026
ದೇವಿ ಮಹಾತ್ಮೆ ಭಾರತೀಯ ಸಿನಿಮಾ ನಿರ್ಮಾಣಕ್ಕೆ ಗ್ರೀಸ್ ಸರಕಾರ 150ಕೋಟಿ ರೂ. ಅನುದಾನ ನೀಡಿದ್ದು ಗ್ರೀಸ್ ದೇಶದ ಅಥೆನ್ಸ್ ನಲ್ಲಿ ಉಡುಪಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಸೋಮವಾರ ಸಿನಿಮಾ ನಿರ್ಮಾಣಕ್ಕೆ ಮುಹೂರ್ತ ನೆರವೇರಿಸಿದರು.
ಈ ಸಂದರ್ಭ ಭಾರತ ಹಾಗೂ ಪೌರ್ವಾತ್ಯ, ಪಾಶ್ಚಾತ್ಯ ತತ್ವಜ್ಞಾನಿಗಳ ಸಮ್ಮೇಳನಕ್ಕೆ ಚಾಲನೆ ನೀಡಿದ ಪುತ್ತಿಗೆ ಶ್ರೀಗಳು ಆಶೀರ್ವಚನ ನೀಡಿ, ವಿಶ್ವದ ಉಳಿವು ಗೀತೆಯ ಸಂದೇಶ ಮತ್ತು ದೇವಿ ಮಹಾತ್ಮೆಯನ್ನು ಅವಲಂಬಿಸಿದೆ. ಅಹಂಕಾರದ ಪ್ರತಿನಿಧಿಯಾದ ಮಹಿಷಾಸುರ ಜಗತ್ತು, ದೇವಿಗೆ ತೊಂದರೆ ನೀಡಿದ್ದು ದೇವಿ ಎಲ್ಲವನ್ನೂ ಮೀರಿದ ದೈವತ್ವದ ಪ್ರತಿರೂಪಳಾಗಿದ್ದಾಳೆ ಎಂದರು.
ಜಾಗತಿಕವಾಗಿ ಭಾರತೀಯ ಸಂಸ್ಕೃತಿ, ಧರ್ಮ ಬೆಳೆಸುವ ನಿಟ್ಟಿನಲ್ಲಿ ಪ್ರಚಾರಕ್ಕಾಗಿ ದೇವಿ ಮಹಾತ್ಮೆ ಸಿನಿಮಾ ನಿರ್ಮಿಸಲಾಗುತ್ತಿದೆ. ಜಗತ್ತಿನ ದುಷ್ಟ ಶಕ್ತಿಯ ಸಂಹಾರ, ಸತ್ ಶಕ್ತಿಯ ಯ ವಿಸ್ತರಣೆಯಾಗಬೇಕು ಎಂದು ಶ್ರೀಗಳು ನುಡಿದರು.
ಬಿಎಪಿಎಸ್ನ ಶ್ರೀ ಭದ್ರೇಶ್ ದಾಸ್ ಸ್ವಾಮೀಜಿ, ಶ್ರೀಶೈಲದ ಚೆನ್ನ ಸಿದ್ಧರಾಮ ಸ್ವಾಮೀಜಿ, ಜನಪ್ರಿಯ ಗ್ರೀಕ್ ನಟ ಅಂತಿಮೋಸ್ ಅನನಿಯದಾಸ್, ಗ್ರೀಸ್ ಭಾರತದ ರಾಯಭಾರ ಕಚೇರಿಯ ಬಾಲ್ಜಿ ನಾಗರಥ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಗ್ರೀಕ್ ದೇಶದ ಗಣ್ಯರು, ಪ್ರಜೆಗಳು ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರಿಂದ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕರಿಸಿದರು.
ಗ್ರೀಸ್ ದೇಶದಲ್ಲಿರುವ ಮುಂಬೈ ಮೂಲದ ಮನು ಕುಮಾರ್, ದೇವಿ ಮಹಾತ್ಮೆ ಸಿನಿಮಾದ ನಿರ್ದೇಶಕ, ನಿರ್ಮಾಪಕರಾಗಿದ್ದಾರೆ. ಅರ್ನಾಬ್ ಭವೇಜಾ ಸಹ ನಿರ್ಮಾಪಕ ಹಾಗೂ ಶಶಾಂಕ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
.jpeg)

