ಎ. 26: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವ್ ಪ್ರಶಸ್ತಿ, ಪುಸ್ತಕ್ ಪುರಸ್ಕಾರ್
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರತಿ ವರ್ಷ ಕೊಂಕಣಿ ಸಾಹಿತ್ಯ, ಕಲೆ, ಜಾನಪದ ಈ ಮೂರು ಕ್ಷೇತ್ರಗಳಲ್ಲಿ 'ಸಾಧನೆಗೈದ ಕೊಂಕಣಿ ಮಹನೀಯರನ್ನು ಗೌರವಿಸಲಾಗುತ್ತಿದ್ದು. ಪ್ರಸ್ತುತ ಸಾಲಿನಲ್ಲಿ 2025 ನೇ ಸಾಲಿನ ಗೌರವ ಪ್ರಶಸ್ತಿಗಾಗಿ ಹಾಗೂ ಪುಸ್ತಕ ಪುರಸ್ಕಾರ ಸಮಾರಂಭವು ಎಪ್ರಿಲ್ 26 ರಂದು ಆದಿತ್ಯವಾರ ಸಂಜೆ 5.00 ಗಂಟೆಗೆ ಉಡುಪಿ ಜಿಲ್ಲೆಯ ಉದ್ಯಾವರ ಚರ್ಚ್ ವಠಾರದಲ್ಲಿ ನಡೆಯಲಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಕ್ಯಾನಿ ಆಲ್ವಾರಿಸ್ ತಿಳಿಸಿದ್ದಾರೆ.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ಎಸ್ ತಂಗಡಗಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಕ್ಯಾನಿ ಅಲ್ವಾರಿಸ್ ಅಧ್ಯಕ್ಷತೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹಾಗೂ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಜೆರಾಲ್ಡ್ ಐಸಾಕ್ ಲೋಬೊ ಇವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖಾರ್ವಿ, ಸಿದ್ದಿ, ಕುಡುಬಿ ಸಮುದಾಯದ ಸಾಂಸ್ಕೃತಿಕ ನೃತ್ಯ, ಬ್ರಾಸ್ ಬ್ಯಾಂಡ್ ಹಾಗೂ ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮವು ನಡೆಯಲಿರುವುದು ಎಂದರು.
2025ನೇ ಸಾಲಿನ ಗೌರವ ಪ್ರಶಸ್ತಿ: ಕೊಂಕಣಿ ಸಾಹಿತ್ಯ ವಿಭಾಗ : ಶ್ರೀ ರೊನ್ ರೊಚ್ ಕಾಸ್ಸಿಯಾ, ಕೊಂಕಣಿ ಕಲೆ ವಿಭಾಗ : ಶ್ರೀ ರಾಮದಾಸ ದತ್ತಾತ್ರೇಯ ಗುಲ್ವಾಡಿ, ಕೊಂಕಣಿ ಜಾನಪದ ವಿಭಾಗ : ಶ್ರೀ ಸೈರು (ಮುರಳೀಧರ) ಪುತ್ತು ನಾಯ್ಕ ಇವರಿಗೆ ಪ್ರಶಸ್ತಿ ನೀಡಲಾಗುವುದು. ಅಲ್ಲದೇ 2025ನೇ ಸಾಲಿನ ಪುಸ್ತಕ ಪುರಸ್ಕಾರ : ಕೊಂಕಣಿ ಕವನ ವಿಭಾಗ : ಕವಿ - ಅಂದ್ರೂ ಎಲ್. ಡಿಕುನ್ಹಾರವರ "ಉಜ್ವಾಡಾಚೆ ವೆಂಗೆಂತ್" ಪುಸ್ತಕ, ಕೊಂಕಣಿ ಲೇಖನ ವಿಭಾಗ : ಲೇಖಕ- ರೋಶನ್ ಮೆಲ್ಕಿ ಸಿಕ್ಕೇರಾರವರ 'ಕೊಂಕ್ಲಿ ಸರ್ಕಸ್' ಪುಸ್ತಕ, ಕೊಂಕಣಿ ಸಣ್ಣಕಥೆಗಳ ವಿಭಾಗ : ಲೇಖಕ- ರಿಚರ್ಡ್ ಅಲ್ವಾರಿಸ್ರವರ "ಫಿತುರಿ" ಪುಸ್ತಕಕ್ಕೆ ಲಭಿಸಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ನವೀನ್ ಲೋಬೊ, ಪರಿಚಯ ಪಾಂಬೂರ್ ಸಂಘಟನೆಯ ಪ್ರಕಾಶ್ ನೊರೊನ್ಹಾ, ನಿರಂತರ್ ಉದ್ಯಾವರ ಸಂಘಟನೆಯ ಸ್ಟೀವನ್ ಕುಲಾಸೊ, ಉದ್ಯಾವರ ಚರ್ಚ್ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ ಹಾಗೂ ಉದ್ಯಾವರ ಚರ್ಚ್ ಕಾರ್ಯದರ್ಶಿ ವಿಲ್ಫ್ರೆಡ್ ಡಿಸೋಜಾ ಉಪಸ್ಥಿತರಿದ್ದರು.