ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ಮಂತ್ರ ಲೇಖನ ಯಜ್ಞಕ್ಕೆ ಚಾಲನೆ
Sunday, May 10, 2026
ಶ್ರೀ ಕೃಷ್ಣ ಮಂತ್ರ ಲೇಖನ ಯಜ್ಞವನ್ನು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಯಾವುದೇ ಒಂದು ಪಾಠವನ್ನು ಅಥವಾ ಜಪವನ್ನು ಕೇವಲ ಬಾಯಲ್ಲಿ ಹೇಳಿದರೆ ಅದು ಪೂರ್ತಿ ಮನಸ್ಸಿನಲ್ಲಿ ಇಲ್ಲದೇ ಹೋಗಬಹುದು, ಅದಕ್ಕೋಸ್ಕರ ಪುನರಪಿ ಬರೆಯುತ್ತಾ ಇದ್ದಲ್ಲಿ ಅದು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ನಿಲ್ಲುತ್ತದೆ. ಅದಕ್ಕೋಸ್ಕರ ಶ್ರೀಕೃಷ್ಣ ಮಂತ್ರವನ್ನು ಪುಸ್ತಕದಲ್ಲಿ ಬರೆದು, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಈ ಯಜ್ಞವನ್ನು ಪ್ರಾರಂಭಿಸಿದ್ದೇವೆ. ನಾಡಿನ ಎಲ್ಲ ಜನರು ಲೇಖನ ಯಜ್ಞದಲ್ಲಿ ಪಾಲ್ಗೊಂಡು ದೇವರ ಅನುಗ್ರಹವನ್ನು ಪಡೆಯಬೇಕು ಎಂದು ಅನುಗ್ರಹಿಸಿ ಆಶೀರ್ವಚನ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಇಸ್ಕಾನ್ನ ಹಿರಿಯ ಉಪಾಧ್ಯಕ್ಷರಾದ ಶ್ರೀ ಚಂಚಲಪತಿ ದಾಸರು ಲೇಖನ ಹೊತ್ತಿಗೆಯನ್ನು ಉದ್ಘಾಟಿಸಿ, ಕೃಷ್ಣ ಮಂತ್ರ ಜಪದ ಮಹಿಮೆಯನ್ನು ವರ್ಣಿಸಿದರು.
ಬೆಂಗಳೂರಿನ ವಿದ್ಯಾ ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲರಾದ ಮಹಾ ಮಹೋಪಾಧ್ಯಾಯ ವಿದ್ವಾನ್ ಹರಿದಾಸ ಭಟ್ಟರು, ಕಲಿಯುಗದಲ್ಲಿ ಕೃಷ್ಣ ಮಂತ್ರದ ಮಹಿಮೆ ಮತ್ತು ಅದರಿಂದ ಆಗುವ ಪ್ರಯೋಜನವನ್ನು ವಿವರಿಸಿದರು. ಉಡುಪಿಯ ಶಾಸಕರಾದ ಸುವರ್ಣ ಹಾಗೂ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶೀರೂರು ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯರು ಸ್ವಾಗತಿಸಿದರು. ಆಸ್ಥಾನ ವಿದ್ವಾಂಸರಾದ ಆನಂದತೀರ್ಥ ಆಚಾರ್ಯರು ಕಾರ್ಯಕ್ರಮವನ್ನು ನಿರೂಪಿಸಿದರು.
