ಸರ್ಕಾರಿ ಶಾಲೆಗಳ ಸಾಧನೆಯಲ್ಲಿ ದಾನಿಗಳ ಕೊಡುಗೆ ಅಪಾರ: ಶಾಸಕ ಯಶ್ಪಾಲ್ ಸುವರ್ಣ
ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣದಲ್ಲಿ ದಾನಿಗಳ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.
ಅವರು ತೆಂಕನಿಡಿಯೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ದಲ್ಲಿ ನೂತನ ಶೌಚಾಲಯ, ಸೈಕಲ್ ಸ್ಟ್ಯಾಂಡ್ ಉದ್ಘಾಟನೆ ಹಾಗೂ ಶಾಲಾ ಸಂಸತ್ ಕಾರ್ಯಕ್ರಮ ಮತ್ತು ಯಕ್ಷ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ವಿದ್ಯಾರ್ಥಿಗಳ ಯಕ್ಷಗಾನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿಯ ಮನವಿಯಂತೆ ಸುಮಾರು 4 ಲಕ್ಷ ರೂ. ಅನುದಾನದಲ್ಲಿ ನೂತನ ಶೌಚಾಲಯ ನಿರ್ಮಿಸಲಾಗಿದೆ. ಅಲ್ಲದೆ, ಶಾಲೆಯ ನಿವೃತ್ತ ಶಿಕ್ಷಕಿ ಪ್ರಕಾಶಿನಿ ಅವರ ಸ್ಮರಣಾರ್ಥ ಅವರ ಕುಟುಂಬದವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸೈಕಲ್ ಸ್ಟ್ಯಾಂಡ್ ನಿರ್ಮಿಸಿ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಶ್ಲಾಘನೀಯವಾಗಿದೆ ಎಂದು ಹೇಳಿದರು. ಈ ಮೂಲಕ ಶಿಕ್ಷಣಕ್ಕೆ ವಿಶೇಷ ಸಹಕಾರ ನೀಡಿದ ಕುಟುಂಬ ಸದಸ್ಯರಿಗೆ ಶಾಸಕನಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಗದೀಶ್ ಆಚಾರ್ಯ, ಮಾಜಿ ಅಧ್ಯಕ್ಷೆ ಸುಕನ್ಯ ಶೆಟ್ಟಿ, ಮಾಜಿ ನಗರಸಭಾ ಸದಸ್ಯ ವಿಜಯ ಕೊಡವೂರು, ದಾನಿ ಆನಂದ್, ಸ್ಥಳೀಯ ಪ್ರಮುಖರಾದ ಶರತ್ ಬೈಲಕೆರೆ, ಗಾಯತ್ರಿ ಸುರೇಶ್, ಕೃಷ್ಣ ಶೆಟ್ಟಿ, ಚರಣ್ ರಾಜ್, ಯಕ್ಷಗಾನ ಗುರು ರತ್ನಾಕರ ಶೆಣೈ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ್ ಉಪಸ್ಥಿತರಿದ್ದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗಾಯತ್ರಿ ಎನ್ ಸ್ವಾಗತಿಸಿದರು. ಶಿಕ್ಷಕ ದಿವಾಕರ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.