
Bantwal: ಅಡಿಕೆ ಕಳವುಗೈದ ಪ್ರಕರಣ; ಆರೋಪಿಯ ಬಂಧನ, ಸೊತ್ತುಗಳ ವಶ
01/08/2025
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಪೂಂಜೂರು ಎಂಬಲ್ಲಿ ಒಣ ಅಡಿಕೆ ಕಳ್ಳತನ ಮಾಡಿರುವ ಆರೋಪಿಯೊಬ್ಬನನ್ನು ಪೊಲೀಸರು ಸೊತ್ತುಗಳ ಸಹಿತ ಬಂಧಿಸಿದ್ದಾರೆ.
ಸುಳ್ಯ ತಾಲೂಕಿನ ಪೈಚಾರು ನಿವಾಸಿ ಸತೀಶ್ (29) ಎಂದು ಗುರುತಿಸಲಾಗಿದೆ. ಮಣಿನಾಲ್ಕೂರು ಗ್ರಾಮದ ಪೂಂಜೂರು ಎಂಬಲ್ಲಿ ಜುಲೈ 3 ರಿಂದ 22 ರ ಅವಧಿಯಲ್ಲಿ ಸುಮಾರು 45 ಪ್ಲಾಸ್ಟಿಕ್ ಚೀಲದಲ್ಲಿದ್ದ 2.20 ಲಕ್ಷ ರೂಪಾಯಿ ಮೌಲ್ಯದ ಒಣ ಅಡಿಕೆ ಕಳವಾಗಿರುವ ಬಗ್ಗೆ ಜುಲೈ 23 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಶಿವಕುಮಾರ್ ಬಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿ0ದ ಕಳವುಗೈದ 74 ಸಾವಿರ ರೂಪಾಯಿ ಮೌಲ್ಯದ 15 ಚೀಲ ಅಡಿಕೆ, 70 ಸಾವಿರ ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ ಗೂಡ್ಸ್ ವಾಹನ ಸಹಿತ 2.24 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.