ಬದಲಾಗುತ್ತಿರುವ ಋತುಗಳಲ್ಲಿ ಬಾಧಿಸುವ ಶೀತ ನೆಗಡಿಯಿಂದ ಮುಕ್ತಿ ಪಡೆಯಲು ಈ ಟಿಪ್ಸ್ ಅನುಸರಿಸಿ
Monday, October 27, 2025
ಋತುಗಳು ಬದಲಾದಂತೆ ಶೀತಜ್ವರ ನೆಗಡಿ ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ. ವೈರಾಣುಗಳು ದೇಹವನ್ನು ಬಾಧಿಸುವುದರಿಂದ ಅಕ್ಟೋಬರ್ ತಿಂಗಳಲ್ಲಿ ಹೆಚ್ಚಾಗಿ ಜನರನ್ನು ಶೀತ ನೆಗಡಿ ಕಾಡುತ್ತದೆ. ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವವರನ್ನು ಹೆಚ್ಚಾಗಿ ಅನಾರೋಗ್ಯ ಕಾಡುತ್ತದೆ. ಹಾಗಾಗಿ ಬದಲಾಗುತ್ತಿರುವ ಋತುವಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪದೇ ಪದೇ ಡಾಕ್ಟರ್ ಬಳಿ ಓಡುವ ಅಗತ್ಯತೆ ಇಲ್ಲ. ಅಡುಗೆ ಮನೆಯಲ್ಲೇ ಸಿಗುವ ಕೆಲವೊಂದಿಷ್ಟು ಪದಾರ್ಥಗಳನ್ನು ಬಳಸಿಕೊಂಡು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಕಾಡುವ ಶೀತ ಜ್ವರದಿಂದ ಮುಕ್ತಿ ನೀಡಲು ಕೆಲವೊಂದಿಷ್ಟು ಟಿಪ್ಸ್ ಇಲ್ಲಿವೆ.
ನಿಂಬೆ:
ನಿಂಬೆಯು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳನ್ನು ಒದಗಿಸುತ್ತದೆ. ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ, ನಿಂಬೆ ನೀರು ಶೀತ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ, ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ ಮತ್ತು ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ. ಪೆಕ್ಟಿನ್ ಫೈಬರ್ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.
ನಿಂಬೆ ರಸವು ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ, ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ನಿಂಬೆಯಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಆಕ್ಸಿಡೇಟಿವ್ ಒತ್ತಡವನ್ನು ತಡೆಯುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಪದೇ ಪದೇ ಬದಲಾಗುತ್ತಿರುವ ಹವಾಮಾನದಲ್ಲಿ ಕಾಡುವ ಹಲವು ರೋಗಗಳಿಗೂ ನಿಂಬೆ ಬಹು ಉಪಕಾರಿ. ಶೀತ ಗಂಟಲು ನೋವು, ಜ್ವರ ಬಂದರೆ ಒಂದು ಲೋಟ ಬಿಸಿ ನೀರಿಗೆ ಒಂದು ನಿಂಬೆ ರಸ ಹಿಂಡಿ ಕುಡಿದರೆ ದೇಹದಲ್ಲಾಗುವ ಬಳಲಿಕೆ ಕಡಿಮೆಯಾಗಲಿದೆ.
ಶುಂಠಿ:
ಶುಂಠಿಯಲ್ಲಿ ಜಿಂಜರೊಲ್ಸ್ ಮತ್ತು ಶಾಯೊಗಾಲ್ಸ್ ಎನ್ನುವ ಎರಡು ಪ್ರಮುಖ ಅಂಶವಿದೆ. ಇದು ಉರಿಯೂತವನ್ನು ಕಡಿಮೆಗೊಳಿಸುತ್ತದೆ. ಶೀತ ಹಾಗೂ ಗಂಟಲು ಕೆರೆತ ಉಂಟುಮಾಡುವ ಹಲವಾರು ರೀತಿಯ ವೈರಸ್ ನಿಂದ ಶುಂಠಿಯು ಉಪಶಮನ ನೀಡುತ್ತದೆ.
ಬೆಳ್ಳುಳ್ಳಿ:
ಬೆಳ್ಳುಳ್ಳಿ ಪ್ರತಿಯೊಂದು ಅಡುಗೆ ಮನೆಯಲ್ಲಿ ಸಿಗುವಂತಹ ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ, ವೈರಲ್ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಶೀತವನ್ನು ಉಂಟುಮಾಡುವ0ತ ಹಲವಾರು ರೀತಿಯ ವೈರಸ್ ನಿಂದ ದೇಹವನ್ನು ಕಾಪಾಡುತ್ತದೆ ಮತ್ತು ಸೋಂಕನ್ನು ತಡೆಯುತ್ತದೆ. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎನ್ನುವ ಅಂಶವು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ಯಾವುದೇ ಸೋಂಕು ಕಾಡದಂತೆ ತಡೆಯುತ್ತದೆ.
ಅರಿಶಿನ
ಅರಿಶಿನವು ಸತು, ಮ್ಯಾಂಗನೀಸ್ ಮತ್ತು ಕರ್ಕ್ಯುಮಿನ್ ಜೊತೆಗೆ ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಅರಿಶಿನದಲ್ಲಿರುವ ಸಂಯುಕ್ತ ಕರ್ಕ್ಯುಮಿನ್ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಪ್ರತಿದಿನ ರಾತ್ರಿ ಅರಿಶಿನ ಹಾಲು ಕುಡಿಯುವುದು ತುಂಬಾ ಪ್ರಯೋಜನಕಾರಿ ಎನ್ನುವುದು ಅಧ್ಯಯನದಲ್ಲೂ ಸಾಭೀತಾದ ಅಂಶ. ಹಾಗಾಗಿ ಅಡುಗೆ ಮನೆಯಲ್ಲಿ ಬಳಸುವ ಅರಿಶಿನ ಸರ್ವ ಋತುವಿನಲ್ಲಿ ದೇಹವನ್ನು ಕಾಡುವ ರೋಗಕ್ಕೂ ರಾಮಬಾಣ ಎಂದರೆ ತಪ್ಪಲ್ಲ. ಪ್ರತೀ ದಿನ ಬೆಳಗ್ಗೆ ಒಂದು ಗ್ಲಾಸ್ ನೀರಿಗೆ ಚಿಟಿಕೆ ಅರಿಶಿನ ಬೆರೆಸಿ ಕುಡಿದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ನೆಲ್ಲಿಕಾಯಿ:
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುತ್ತದೆ ಮತ್ತು ರೋಗನಿರೋಧಕ ಕೋಶಗಳನ್ನು ಸಕ್ರಿಯಗೊಳಿಸುತ್ತದೆ. ಶೀತ ಮತ್ತು ಜ್ವರ ತರಹದ ಲಕ್ಷಣಗಳನ್ನು ತಡೆಯಲು ತುಂಬಾ ಸಹಕಾರಿ. ಹಾಗಾಗಿ ಶೀತ ಜ್ವರ ಬಾಧೆ ದೇಹವನ್ನು ಬಾಧಿಸಿದರೆ ನೆಲ್ಲಿಕಾರಿ ಜ್ಯೂಸ್ ಮಾಡಿ ಕುಡಿದರೆ ಪರಿಣಾಮಕಾರಿ.
ಕಿತ್ತಳೆ:
ಶೀತ ಕಾಡಿದರೆ ಕಿತ್ತಳೆ ತಿನ್ನುವುದು ಸರಿಯಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಕಾಡುವ ಶೀತಕ್ಕೆ ಕಿತ್ತಳೆಯೂ ಔಷಧ ಎನ್ನುವುದು ಹಲವರಿಗೆ ತಿಳಿದಿಲ್ಲ. ಕಿತ್ತಳೆಯಲ್ಲಿರುವ ವಿಟಮಿನ್ ಸಿ ದೇಹವನ್ನು ಸೋಂಕುಗಳಿ0ದ ರಕ್ಷಿಸುತ್ತದೆ ಮತ್ತು ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಪ್ರತಿದಿನ ಕಿತ್ತಳೆ ತಿನ್ನುವುದು ಶೀತ ಮತ್ತು ಜ್ವರದಂತಹ ಕಾಲೋಚಿತ ಕಾಯಿಲೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ಹವಾಮಾನ ಬದಲಾದಂತೆ, ಮಳೆ ಗಾಳಿ, ಸೆಖೆ, ಚಳಿ ಇವುಗಳಿಂದ ಮನುಷ್ಯನ ದೇಹವನ್ನು ವೈರಾಣುಗಳು ಬಾಧಿಸುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನಂತೂ ಈ ಶೀತ ಬಾಧೆ ಇನ್ನಿಲ್ಲದಂತೆ ಕಾಡುತ್ತದೆ. ಹೀಗಾಗಿ ಹೆಚ್ಚಾಗಿ ಡಾಕ್ಟರ್ ಬಳಿ ತೆರಳುತ್ತಾರೆ. ಆದರೆ ಮನೆಯಲ್ಲಿರುವ ಕೆಲವೊಂದಿಷ್ಟು ವಸ್ತುಗಳನ್ನು ನಿಯಮಿತ ಪ್ರಮಾಣದಲ್ಲಿ ಬಳಸಿದರೆ ಕಾಡುವ ಕಾಯಿಲೆಯಿಂದ ಮುಕ್ತಿ ಪಡೆಯಬಹುದು.






