24ನೇ ವರ್ಷದ ಕೆಮ್ತೂರು ತುಳು ನಾಟಕ ಪ್ರಶಸ್ತಿ ಪ್ರದಾನ ಸಮಾರಂಭ
ತುಳು ಭಾಷೆ, ತುಳುನಾಡಿನ ಆಚಾರ-ವಿಚಾರ, ಸಂಸ್ಕೃತಿ ಹಾಗೂ ವಿಶಿಷ್ಟ ವ್ಯವಸ್ಥೆಯನ್ನು ವಿಶ್ವಕ್ಕೆ ಪರಿಚಯಿಸುವಲ್ಲಿ ಉಡುಪಿಯ ತುಳುಕೂಟ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. 24 ವರ್ಷದಿಂದ ತುಳು ನಾಟಕ ಸ್ಪರ್ಧೆ ಆಯೋಜಿಸುವ ಮೂಲಕ ತುಳು ಭಾಷೆ, ತುಳು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ. ತುಳುಕೂಟದ ಈ ಕಾರ್ಯ ಹಾಗೂ ಕೊಡುಗೆ ವಿಶ್ವದ ಇತರ ಭಾಷೆಗಳಿಗೂ ಮಾದರಿಯಾಗಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಶ್ಲಾಘಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುಕೂಟ ಉಡುಪಿ ವತಿಯಿಂದ ಆಯೋಜಿಸಿದ್ದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮರಣಾರ್ಥ 24ನೇ ವರ್ಷದ ಕೆಮ್ತೂರು ತುಳು ನಾಟಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಉದ್ಯಾವರ ನಾಗೇಶಕುಮಾರ್, ಉಡುಪಿ ತುಳುಕೂಟದ ಸ್ಥಾಪಕ ಅಧ್ಯಕ್ಷ ಡಾ. ಭಾಸ್ಕರಾನಂದ ಕುಮಾರ್, ಬಿಲ್ಲವ ಸಮಾಜ ಸೇವಾ ಸಂಘ ಮಲ್ಪೆಯ ಅಧ್ಯಕ್ಷ ಗೋಪಾಲ್ ಸಿ. ಬಂಗೇರ, ತುಳುಕೂಟ ಉಡುಪಿಯ ಉಪಾಧ್ಯಕ್ಷ ಭುವನ ಪ್ರಸಾದ್ ಹೆಗ್ಡೆ, ಕೆಮ್ತೂರು ಕುಟುಂಬದ ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ತುಳು ನಾಟಕ ಸ್ಪರ್ಧೆಯ ತೀರ್ಪುಗಾರರಾಗಿದ್ದ ಡಾ.ಸುಕನ್ಯಾ ಮೇರಿ ಮಾರ್ಟಿಸ್ ಅವರನ್ನು ಗೌರವಿಸಲಾಯಿತು.
ತೇಜಸ್ವಿನಿ ಅನಿಲ್ ಪ್ರಾರ್ಥಿಸಿದರು. ತುಳುಕೂಟ ಉಡುಪಿ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಟಕ ಸ್ಪರ್ಧೆಯ ಕುರಿತಾಗಿ ನಾಟಕ ಪರ್ಬ ಸಂಚಾಲಕ ಬಿ.ಪ್ರಭಾಕರ್ ಭಂಡಾರಿ ಮಾಹಿತಿ ನೀಡಿದರು. ಖಜಾಂಜಿ ಚೈತನ್ಯ ಎಂ.ಜಿ. ಪ್ರಶಸ್ತಿ ಪುರಸತರ ಪಟ್ಟಿ ವಾಚಿಸಿದರು. ರತ್ನಾಕರ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು. ತುಳುಕೂಟ ಉಡುಪಿಯ ಉಪಾಧ್ಯಕ್ಷ ದಿವಾಕರ್ ಸನಿಲ್ ವಂದಿಸಿದರು.
ಸಭಾ ಕಾರ್ಯಕ್ರಮದ ಮೊದಲು ಜಯರಾಂ ಮಣಿಪಾಲ್ ಮತ್ತು ತಂಡದಿಂದ 'ಪದರಂಗಿತ' ತುಳುಗೀತೆ ಗಾಯನ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ತಮಾಂಗ್ ಹಿರೋಶಿ ಮೂಲ ಕಥೆಯ, ಬಾಲಕೃಷ್ಣ ಶಿಬಾರ್ಲ ಅವರ ರಂಗರೂಪ ಹಾಗೂ ಅನುವಾದದಲ್ಲಿ, ವಿದ್ದು ಉಚ್ಚಿಲ ಅವರ ವಿನ್ಯಾಸ ಹಾಗೂ ನಿರ್ದೇಶನದಲ್ಲಿ 'ಯೇಸ' ನಾಟಕ ಪ್ರದರ್ಶನ ಗೊಂಡಿತು.


