ಮಾ. 25- 28: ಶೀರೂರಿನಲ್ಲಿ ವಿಜೃಂಭಣೆಯ ರಾಮನವಮಿ ಉತ್ಸವ (Video)
ಈ ಬಾರಿಯ ರಾಮನವಮಿ ಮಹೋತ್ಸವವನ್ನು ಹಿರಿಯಡ್ಕ ಸಮೀಪದ ಜಾಬಾಲಿ ಋಷಿ ತಪೋನಿರತ ಪಾಪಾನಶಿನಿ ಸುವರ್ಣ ನದಿಯ ತಟದಲ್ಲಿರುವ ಶೀರೂರಿನಲ್ಲಿ 72ನೇ ಉತ್ಸವವನ್ನಾಗಿ ಪರಿಗಣಿಸಿ ಮಾರ್ಚ್ 25 ರಿಂದ 28 ರವರೆಗೆ ನಾಲ್ಕು ದಿನಗಳ ವಿಜೃಂಭಣೆಯ ಉತ್ಸವವನ್ನಾಗಿ ಆಚರಿಸಲಾಗುವುದು ಎಂದು ಶೀರೂರು ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ ತಿಳಿಸಿದ್ದಾರೆ.
ಶೀರೂರು ಮಠದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಮಾರ್ಚ್ 25 ರಂದು ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ ಪಟ್ಟದ ದೇವರ ಪೂಜೆ, 26ರಂದು ಸಂಜೆ ಕಟ್ಟೆ ಪೂಜೆ, 27ರಂದು ಬೆಳಿಗ್ಗೆ 7.00 ರಿಂದ ಪಂಚಾಮೃತ ಸಹಿತ ವಿಶೇಷ ಪೂಜೆ, ಪವಮಾನ ಕಲಶಾಭಿಶೇಕ, ಶ್ರೀಮುಖ್ಯಪ್ರಾಣ ದೇವರ ಪೂಜೆ, ಪಲ್ಲ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ಇತ್ಯಾದಿ ದೇವತಾ ಕಾರ್ಯಕ್ರಮಗಳು ನಡೆಯಲಿದೆ. ಇದೇ ಸಂದರ್ಭದಲ್ಲಿ ಉಡುಪಿ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರಿಂದ ಸಂಸ್ಥಾನ ಪೂಜೆ, ಹಾಗೂ ಬೆಳಿಗ್ಗೆ 10.00 ರಿಂದ ರಾಯಚೂರು ಶ್ರೀ ಶೇಷಗಿರಿದಾಸರು ಮತ್ತು ಅವರ ಬಳಗದಿಂದ ದಾಸವಾಣಿ (ಸಂಗೀತ) ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.00 ಘಂಟೆಗೆ ಗೆಜ್ಜೆಗಿರಿ ಮೇಳದಿಂದ ಶ್ರೀಕೃಷ್ಣ ಲೀಲಾಮೃತ ಎನ್ನುವ ಯಕ್ಷಾಗಾನ ಬಯಲಾಟವು ಇದೆ. ನಂತರ ಸಾಯಂಕಾಲ 4.30 ಕ್ಕೆ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಆಗಮನ ಮತ್ತು ಪ್ರಾಣದೇವರಿಗೆ ರಂಗಪೂಜೆ ನಂತರ 7.00 ಘಂಟೆಗೆ ಮಹಾರಥೋತ್ಸವ, ಹಾಗೂ ಓಲಗಮಂಟಪ ಪೂಜೆ ನಡೆಯಲಿದೆ ಎಂದರು.
ಮಾ. 28ರ ಬೆಳಿಗ್ಗೆ 9.00 ಕ್ಕೆ ಹಗಲು ರಥೋತ್ಸವ ಮತ್ತು ಸುವರ್ಣ ನದಿಯಲ್ಲಿ ಅವಭೃತ ಸ್ನಾನ ಕಾರ್ಯಕ್ರಮವಿದೆ. ಅಲ್ಲದೇ ಶ್ರೀಕೃಷ್ಣಾಪುರ ಮಠಾಧೀಶರ ಸಂಸ್ಥಾನ ಪೂಜೆ ನಡೆಯಲಿದೆ. ಹಾಗೂ ಸಂಜೆ ಮಠದ ದೈವವಾದ ಬೊಬ್ಬರ್ಯ ದೈವದ ಕೋಲವೂ ನಡೆಯಲಿದೆ ಎಂದರು.
ರಥೋತ್ಸವದ ವಿಶೇಷವೆಂದರೆ ಉಡುಪಿ ರಥಬೀದಿಯಲ್ಲಿರುವಂತೆ ರಥವನ್ನು ವೃತ್ತಾಕಾರವಾಗಿ ಸುತ್ತು ಬರುವ ರೀತಿಯಲ್ಲಿ ರಥಬೀದಿಯ ನಿರ್ಮಾಣವನ್ನು ಮಾಡಲಾಗಿದೆ. ಈ ಹಿಂದೆ ಕೇವಲ ರಥವು ಬೀದಿಯಲ್ಲಿ ಮುಂದೆ ಹೋಗಿ ಹಾಗೆಯೇ ಹಿಂದಕ್ಕೆ ಬರುವ ವ್ಯವಸ್ಥೆ ಇತ್ತು. ಅಲ್ಲದೆ ಸುಮಾರು 70 ವರ್ಷಗಳ ಹಿಂದೆ ನಿರ್ಮಾಣವಾದ ಅಲ್ಲಿನ ರಥವನ್ನು ಕೂಡ ಶಿಥಿಲಗೊಂಡ ಭಾಗಗಳನ್ನು ದುರಸ್ಥಿಗೊಳಿಸಿ ಪುನರ್ ನಿರ್ಮಾಣಮಾಡಲಾಗಿದೆ. ಹಾಗಾಗಿ ಭಕ್ತರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೇಂದು ತಿಳಿಸಿದರು.