ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ಯುವಕ ರೈಲಿನಿಂದ ಜಿಗಿಯಲು ಯತ್ನ; ತಪಾಸಣಾಧಿಕಾರಿಯಿಂದ ರಕ್ಷಣೆ
Tuesday, March 31, 2026
ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಚಲಿಸುತ್ತಿದ್ದ ರೈಲಿನ ಬಾಗಿಲಿನಿಂದ ಹೊರ ಜಿಗಿಯಲು ಯತ್ನಿಸುತ್ತಿದ್ದ ವೇಳೆ ಕರ್ತವ್ಯ ನಿರ್ವಸುತ್ತಿದ್ದ ತಪಾಸಣಾಧಿಕಾರಿ ಬಾಬು ಅವರು ರಕ್ಷಿಸಿದ ಘಟನೆ ಇನ್ನಂಜೆಯಲ್ಲಿ ನಡೆದಿದೆ.
ಕೇರಳದಿಂದ ಮುಂಬೈಗೆ ತೆರಳುತ್ತಿದ್ದ ರೈಲು, ಇನ್ನಂಜೆ ರೈಲು ನಿಲ್ದಾಣದ ಸಮೀಪ ಬಂದಾಗ ಈ ಘಟನೆ ನಡೆದಿದೆ. ರಕ್ಷಿಸಿದ್ದ ಯುವಕನನ್ನು ಬಾಬು ಅವರು, ಇಂದ್ರಾಳಿಯ ಆರ್ ಪಿ ಎಫ್ ಕಛೇರಿ ವಶಕ್ಕೆ ಒಪ್ಪಿಸಿದರು. ಯುವಕ ಮನೋರೋಗಿ ಎಂದು ತಿಳಿದು ಬಂದಿರುವುದರಿಂದ ರೈಲ್ವೆ ಪೋಲಿಸರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೆರವು ಪಡೆದು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸುವ ವ್ಯವಸ್ಥೆಗೊಳಿಸಿದರು. ಆಸ್ಪತ್ರೆ ದಾಖಲು ಪ್ರಕ್ರಿಯೆ ನಡೆಸುವಾಗ ಹೆಸರು ಸಹಾದ್ (25) ಕೊಯಿಕೊಡ್ ನಿವಾಸಿ ಎಂದಷ್ಟೇ ಹೇಳಿಕೊಂಡಿದ್ದಾನೆ.
ಕಾರ್ಯಾಚರಣೆಯಲ್ಲಿ ಟಿ.ಸಿ ಸುನೀಲ್, ಆರ್.ಪಿ.ಎಫ್ ರವಿಪ್ರಕಾಶ್, ಜೀನ ಪಿಂಟೋ ಭಾಗಿಯಾಗಿದ್ದರು.