ಪಡುಬಿದ್ರೆ ಮಹಾಲಿಂಗೇಶ್ವರ ಮಹಾಗಣಪತಿ ಬ್ರಹ್ಮಕಲಶ: ಎ. 26 ಸಂಚಾರ ಬದಲಾವಣೆ
ಎ. 26ರಂದು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನಃ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಸಂಚಾರ ಬದಲಾವಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ಎ. 23ರಿಂದ ಮೇ4 ರವರೆಗೆ ದೇವರ ಪುನಃ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಈ ಪ್ರಯುಕ್ತ ಎ.26 ರಂದು ಸಂಜೆ 3 ಗಂಟೆಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಸಂಚಾರ ಅಡಚಣೆ ನಿಯಂತ್ರಣ ಮಾಡುವ ಉದ್ದೇಶದಿಂದಎ.26ರಂದು ಅಪರಾಹ್ನ 3 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮಾರ್ಗ ಬದಲಾವಣೆ ಹಾಗೂ ಸಂಚಾರ ನಿಷೇಧಕ್ಕೆ ಆದೇಶ ಹೊರಡಿಸಲಾಗಿದೆ.
ಉಡುಪಿ-ಮಂಗಳೂರು ಮಾರ್ಗವಾಗಿ ಹಾಗೂ ಮಂಗಳೂರು-ಉಡುಪಿ ಮಾರ್ಗವಾಗಿ ಬರುವ ಎಲ್ಲಾ ವಾಹನಗಳನ್ನು ದಿನಾಂಕ:26-04-2026 ರಂದು ಅಪರಾಹ್ನ 3 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಬೀಡು ಡೈವರ್ಶನ್ ನಿಂದ ಕಲ್ಸಂಕ ನಾರಳ್ತಾಯ ಡೈವರ್ಶನ್ ವರೆಗೆ ಉಡುಪಿ-ಮಂಗಳೂರು ಏಕಮುಖ ರಸ್ತೆಯಲ್ಲಿ ದ್ವಿಮುಖವಾಗಿ ಸಂಚರಿಸುವುದು.
ಎ.26ರಂದು ಅಪರಾಹ್ನ 3 ಗಂಟೆಯಿಂದ ಸಂಜೆ 7 ಗಂಟೆವರೆಗೆ ಬೀಡು ಡೈವರ್ಶನ್ ನಿಂದ ಕಲ್ಸಂಕ ನಾರಳ್ತಾಯ ಡೈವರ್ಶನ್ ವರೆಗೆ ಮಂಗಳೂರು-ಉಡುಪಿ ಏಕಮುಖ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿದೆ.
ಈ ಅಧಿಸೂಚನೆಯನ್ನು ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮ 1989 ರ ನಿಯಮ 221 5(ಎ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸ್ವರೂಪ ಅವರು ಆದೇಶ ಹೊರಡಿಸಿದ್ದಾರೆ.