ಮಣಿಪಾಲವನ್ನು ಶಿಕ್ಷಣಕಾಶಿಯನ್ನಾಗಿಸಿದ ಡಾ. ಟಿ.ಎಂ.ಎ ಪೈ 128ನೇ ಜನ್ಮದಿನೋತ್ಸವ
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಸಂಸ್ಥಾಪಕರಾದ ಡಾ. ಟಿ.ಎಂ.ಎ. ಪೈ ಅವರ 128ನೇ ಜನ್ಮದಿನವನ್ನು ಏಪ್ರಿಲ್ 30ರಂದು ಮಣಿಪಾಲದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಡಾ. ಟಿ.ಎಂ.ಎ. ಪೈ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಣಿಪಾಲ್ ಟ್ರಸ್ಟ್ನ ಟ್ರಸ್ಟಿ ವಸಂತಿ ಆರ್. ಪೈ, ಮಾಹೆ ಟ್ರಸ್ಟ್ ಹಾಗೂ ಎಂಇಎಂಜಿ ಅಧ್ಯಕ್ಷರಾದ ಡಾ. ರಂಜನ್ ಆರ್. ಪೈ, ಮಣಿಪಾಲದ ಡಾ. ಟಿ.ಎಂ.ಎ. ಪೈ ಫೌಂಡೇಶನ್ನ ಅಧ್ಯಕ್ಷರಾದ ಟಿ. ಅಶೋಕ್ ಪೈ, ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ನ ಕಾರ್ಯನಿರ್ವಾಹಕ ಅಧ್ಯಕ್ಷರು ಹಾಗೂ ಎಜಿಇ ಉಪಾಧ್ಯಕ್ಷರಾದ ಟಿ. ಸತೀಶ್ ಯು. ಪೈ ಮತ್ತು ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಹೆ ಕುಲಪತಿ ಲೆ. ಜ. (ಡಾ.) ಎಂ. ಡಿ. ವೆಂಕಟೇಶ್ ಅವರು ಪಾಲ್ಗೊಂಡಿದ್ದರು.
ಮಾಹೆ ಟ್ರಸ್ಟ್ ಹಾಗೂ ಎಂಇಎಂಜಿ ಅಧ್ಯಕ್ಷರಾದ ಡಾ. ರಂಜನ್ ಆರ್. ಪೈ ಅವರು ಮಾತನಾಡಿ, ʼದೇಶದ ಪ್ರಗತಿಗೆ ಶಿಕ್ಷಣ ಮತ್ತು ಆರೋಗ್ಯ ಅತ್ಯಗತ್ಯ ಎಂಬುದು ಡಾ. ಟಿ.ಎಂ.ಎ. ಪೈ ಅವರ ದೃಢ ನಂಬಿಕೆಯಾಗಿತ್ತು. ಮಣಿಪಾಲ್ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅವರ ಸೇವಾ ಮನೋಭಾವವೇ ಕಾರಣ. ಗುಣಮಟ್ಟದ ಕಲಿಕೆ, ಹೊಸ ಆವಿಷ್ಕಾರ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಎತ್ತಿ ಹಿಡಿಯುವ ಮೂಲಕ ಅವರ ಆಶಯವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸಂಕಲ್ಪವನ್ನು ನಾವು ಮಾಡಿದ್ದೇವೆʼ ಎಂದು ಹೇಳಿದರು.
ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು ಮಾತನಾಡಿ, ‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಮತ್ತು ಆರೋಗ್ಯ ತಲುಪಬೇಕು ಎಂದು ಡಾ. ಟಿ.ಎಂ.ಎ. ಪೈ ಅವರು ಕನಸು ಕಂಡಿದ್ದರು. ಅಂದು ಅವರು ಹಾಕಿಕೊಟ್ಟ ಭದ್ರಬುನಾದಿಯೇ ಇಂದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿದೆ. ಕೇವಲ ಒಂದು ಸಂಸ್ಥೆಯನ್ನು ಕಟ್ಟುವುದಷ್ಟೇ ಅವರ ಗುರಿಯಾಗಿರಲಿಲ್ಲ, ಬದಲಾಗಿ ಒಂದು ಸಮರ್ಥ ಸಮಾಜವನ್ನು ನಿರ್ಮಿಸುವುದು ಅವರ ಉದ್ದೇಶವಾಗಿತ್ತು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವʼ ಎಂದರು.
ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್ ಅವರು, ‘ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆಯ ಚರ್ಚೆಗಳು ಆರಂಭವಾಗುವ ಮೊದಲೇ ಅವರು ಸುಸ್ಥಿರತೆಯನ್ನು ಪಾಲಿಸಿದ್ದರು. ಕೃಷಿ ಭೂಮಿ ಅಥವಾ ಕಾಡನ್ನು ನಾಶಪಡಿಸದೆ, ಬಂಜರು ಭೂಮಿಯಲ್ಲಿ ಶಿಕ್ಷಣ ಸಂಸ್ಥೆಯನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರಕೃತಿ ಮತ್ತು ಮಾನವ ನಿರ್ಮಿತ ಪ್ರಗತಿ ಒಟ್ಟಾಗಿ ಸಾಗಬಹುದು ಎಂಬುದನ್ನು ತೋರಿಸಿಕೊಟ್ಟರು. ಇಂದು ಪರಿಸರ ಕಾಳಜಿ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ, ಮಾಹೆ ಸಂಸ್ಥೆಯ ಬುನಾದಿಯೇ ಅಂತಹ ಉನ್ನತ ಚಿಂತನೆಗಳಿಂದ ಕೂಡಿವೆ ಎಂಬುದು ಹೆಮ್ಮೆಯ ವಿಷಯʼ ಎಂದು ತಿಳಿಸಿದರು.
ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಮಾಜ ಸೇವೆಗೆ ಗೌರವ: ಶೈಕ್ಷಣಿಕ ಸಾಧನೆ ಮತ್ತು ಸಮಾಜ ಸೇವೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಿವಿಧ ಪ್ರಶಸ್ತಿ ಹಾಗೂ ವಿದ್ಯಾರ್ಥಿ ವೇತನಗಳನ್ನು ವಿತರಿಸಲಾಯಿತು. ಶ್ರೀಮತಿ ಇಂದಿರಾ ಎಸ್. ಬಲ್ಲಾಳ್ ಮತ್ತು ಡಾ. ಎಚ್. ಎಸ್. ಬಲ್ಲಾಳ್ ಅವರ ಆಶಯದಂತೆ ರೂಪಿಸಲಾದ 'ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ದತ್ತಿ ನಿಧಿ'ಯನ್ನು ಬಿಡುಗಡೆ ಮಾಡಲಾಯಿತು. ಈ ಯೋಜನೆಯು ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಭರವಸೆ ನೀಡುವ ನಿಟ್ಟಿನಲ್ಲಿ ಸಂಸ್ಥೆ ಕೈಗೊಂಡ ಒಂದು ಮಹತ್ವದ ಹೆಜ್ಜೆಯಾಗಿದೆ.
ವಿದ್ಯಾರ್ಥಿವೇತನ ಮತ್ತು ಸಾಧಕರಿಗೆ ಸನ್ಮಾನ: 'ಕುಂದಾಪುರ ಮೋಹನ್ ಮತ್ತು ಲತಾ ಭಂಡಾರ್ಕರ್' ಹಾಗೂ 'ಕದಂಬಿ' ವಿದ್ಯಾರ್ಥಿವೇತನಗಳನ್ನು ವಿತರಿಸಲಾಯಿತು. ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ (2023-24 ಮತ್ತು 2024-25) ವಿವಿಧ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದ 42 ವಿದ್ಯಾರ್ಥಿಗಳು ಹಾಗೂ 19 ಮಣಿಪಾಲ್ ಸ್ಕಾಲರ್ಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಈ ಮೂಲಕ ಸಂಸ್ಥೆಯು ಶೈಕ್ಷಣಿಕ ಶ್ರೇಷ್ಠತೆಗೆ ನೀಡುವ ಆದ್ಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿತು.
ಆರೋಗ್ಯ ಸೇವೆ ಮತ್ತು ಸಹಾಯಕ ಸಿಬ್ಬಂದಿಗೆ ಮನ್ನಣೆ: ಸಮಾಜದ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸುತ್ತಿರುವ 'ತೆರೆಯ ಮರೆಯ ಸಾಧಕರನ್ನು' ಕಾರ್ಯಕ್ರಮದಲ್ಲಿ ಗುರುತಿಸಲಾಯಿತು. ನರ್ಸಿಂಗ್, ಅಂಗನವಾಡಿ ಮತ್ತು ಹಾಸ್ಟೆಲ್ ಉಸ್ತುವಾರಿ ವಿಭಾಗಗಳಲ್ಲಿ ಶ್ಲಾಘನೀಯ ಸೇವೆ ನೀಡಿದವರಿಗೆ ಶ್ರೀಮತಿ ಶಾರದಾ ಎಂ. ಪೈ - ಡಾ. ಪದ್ಮಾ ರಾವ್ ಮತ್ತು ಶ್ರೀಮತಿ ಗೀತಾ ಕೆ. ನಾಯಕ್ ಅವರ ಸ್ಮರಣಾರ್ಥ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು. ಡಾ. ಟಿ.ಎಂ.ಎ. ಪೈ ಅವರು ಹಾಕಿಕೊಟ್ಟ ಸೇವಾ ಮನೋಭಾವ ಮತ್ತು ಶ್ರೇಷ್ಠತೆಯ ದಾರಿಯಲ್ಲಿ ಮಾಹೆ ಸಂಸ್ಥೆಯು ಮುನ್ನಡೆಯುತ್ತಿರುವುದಕ್ಕೆ ಇದು ಸಾಕ್ಷಿಯಾಯಿತು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆ. ಮಾಹೆಯು ಮಣಿಪಾಲ, ಮಂಗಳೂರು, ಬೆಂಗಳೂರು, ಜಮ್ಶೆಡ್ಪುರ ಮತ್ತು ದುಬೈನಲ್ಲಿರುವ ತನ್ನ ವಿವಿಧ ಕ್ಯಾಂಪಸ್ಗಳ ಮೂಲಕ ಆರೋಗ್ಯ ವಿಜ್ಞಾನ, ಮ್ಯಾನೇಜ್ಮೆಂಟ್, ಕಾನೂನು, ಮಾನವಿಕ ಮತ್ತು ತಾಂತ್ರಿಕ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 400ಕ್ಕೂ ಹೆಚ್ಚು ವಿಶೇಷ ಪದವಿಗಳನ್ನು ನೀಡುತ್ತಿದೆ. ಅತ್ಯುತ್ತಮ ಶೈಕ್ಷಣಿಕ ದಾಖಲೆ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿನ ಗಮನಾರ್ಹ ಕೊಡುಗೆಯಿಂದಾಗಿ ಮಾಹೆಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ. 2020ರಲ್ಲಿ ಭಾರತ ಸರ್ಕಾರವು ಮಾಹೆಗೆ 'ಉತ್ಕೃಷ್ಟ ಸಂಸ್ಥೆ' ಎಂಬ ಗೌರವವನ್ನು ನೀಡಿದೆ. ಪ್ರಸ್ತುತ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ (ಎನ್ಐಆರ್ಎಫ್) 3ನೇ ರ್ಯಾಂಕಿಂಗ್ ಪಡೆದಿರುವ ಮಾಹೆಯು, ಪರಿಣಾಮಕಾರಿ ಕಲಿಕೆ ಮತ್ತು ಉತ್ಕೃಷ್ಟ ಕ್ಯಾಂಪಸ್ ಜೀವನವನ್ನು ಬಯಸುವ ವಿದ್ಯಾರ್ಥಿಗಳಿಗೆ ಹಾಗೂ ಅಗ್ರಗಣ್ಯ ಪ್ರತಿಭೆಗಳನ್ನು ಹುಡುಕುವ ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಮೊದಲ ಆಯ್ಕೆಯಾಗಿದೆ.
