ಮನೆ ಕಳ್ಳತನ ಪ್ರಕರಣ: ಆರೋಪಿಯ ಬಂಧನ
Sunday, May 10, 2026
ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಆರೋಪಿಯನ್ನು ಮಂಗಳೂರು ರೈಲ್ವೆ ರಕ್ಷಣಾ ಪಡೆ ಬಂಧಿಸಿದೆ. ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಹೊಸದುರ್ಗ ನಿವಾಸಿ ಆಶಿಫ್ ಪಿ.ಎಚ್. ಎಂದು ಗುರುತಿಸಲಾಗಿದೆ.
ಮೇ 7ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯನ್ನು ಆರ್.ಪಿ.ಎಫ್ ಸಿಬ್ಬಂದಿ ವಶಕ್ಕೆ ಪಡೆದು ತಪಾಸಣೆ ನಡೆಸಿದರು. ಈ ವೇಳೆ ಆರೋಪಿಯ ಬ್ಯಾಗ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಚಿನ್ನಾಭರಣಗಳು ಪತ್ತೆಯಾಗಿದ್ದು, ವಿಚಾರಣೆಯಲ್ಲಿ ತ್ರಿಶೂರ್ ಜಿಲ್ಲೆಯ ಪಾವರಟ್ಟಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಚಿನ್ನಾಭರಣಗಳಾಗಿವೆ ಎಂಬುದು ಬಹಿರಂಗವಾಯಿತು. ಬಂಧಿತನಿಂದ ಸುಮಾರು 93.5 ಗ್ರಾಂ ತೂಕದ, ಅಂದಾಜು 13 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಾವರಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮನೆ ಒಡೆದು ಕಳ್ಳತನ ಪ್ರಕರಣದಲ್ಲಿ ಈ ಚಿನ್ನಾಭರಣಗಳು ಕಳುವಾಗಿದ್ದವು ಎಂದು ಪೊಲೀಸರು ದೃಢಪಡಿಸಿದ್ದಾರೆ. ಇನ್ನಷ್ಟು ವಿಚಾರಣೆಯಲ್ಲಿ ಆರೋಪಿಯ ವಿರುದ್ಧ ಕೇರಳದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮನೆ ಕಳ್ಳತನ, ದರೋಡೆ ಹಾಗೂ ಇತರೆ ಅಪರಾಧ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಹಲವು ಜಾಮೀನು ರಹಿತ ವಾರಂಟ್ ಗಳೂ ಬಾಕಿ ಇವೆ ಎಂದು ತಿಳಿದುಬಂದಿದೆ. ಆರೋಪಿಯನ್ನು ವಶಪಡಿಸಿಕೊಂಡ ಆರ್ಪಿಎಫ್ ಅಧಿಕಾರಿಗಳು, ಬಳಿಕ ಪಾವರಟ್ಟಿ ಪೊಲೀಸರಿಗೆ ಆರೋಪಿಯನ್ನೂ ಹಾಗೂ ವಶಪಡಿಸಿಕೊಂಡ ಚಿನ್ನಾಭರಣಗಳನ್ನೂ ಹಸ್ತಾಂತರಿಸಿದ್ದಾರೆ.
