-->
 ದೇಶದ ಆರ್ಥಿಕ ಸುರಕ್ಷತೆಗಾಗಿ ಪ್ರಧಾನಿಯ ದೂರದೃಷ್ಟಿಯ ರಾಷ್ಟ್ರೀಯ ಕರೆ- ಶಶಾಂಕ್ ಶಿವತ್ತಾಯ

ದೇಶದ ಆರ್ಥಿಕ ಸುರಕ್ಷತೆಗಾಗಿ ಪ್ರಧಾನಿಯ ದೂರದೃಷ್ಟಿಯ ರಾಷ್ಟ್ರೀಯ ಕರೆ- ಶಶಾಂಕ್ ಶಿವತ್ತಾಯ


ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರು ಇತ್ತೀಚೆಗೆ ದೇಶದ ಜನತೆಗೆ ಮಾಡಿದ ಮನವಿ,  ಅಗತ್ಯವಿಲ್ಲದ ಚಿನ್ನದ ಖರೀದಿಯನ್ನು ಕೆಲಕಾಲ ಮುಂದೂಡುವುದು, ಅನಗತ್ಯ ವಿದೇಶ ಪ್ರವಾಸಗಳನ್ನು ಕಡಿಮೆ ಮಾಡುವುದು, ಸಾಧ್ಯವಾದಲ್ಲಿ ವರ್ಕ್ ಫ್ರಮ್ ಹೋಮ್ ಅನುಸರಿಸುವುದು ಹಾಗೂ ಇಂಧನ ಉಳಿತಾಯಕ್ಕೆ ಒತ್ತು ನೀಡುವುದು — ಇವೆಲ್ಲವೂ ದೇಶದ ಆರ್ಥಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೀಡಲಾದ ಜವಾಬ್ದಾರಿಯುತ ಹಾಗೂ ದೂರದೃಷ್ಟಿಯ ಸಲಹೆಗಳಾಗಿವೆ ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಶಶಾಂಕ್ ಶಿವತ್ತಾಯ ತಿಳಿಸಿದ್ದಾರೆ. 

ಪ್ರಸ್ತುತ ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಜಾಗತಿಕ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಕಚ್ಚಾ ತೈಲದ ಬೆಲೆ ಏರಿಕೆ, ಸಾಗಾಟ ವೆಚ್ಚ ಹೆಚ್ಚಳ, ವಿದೇಶಿ ವಿನಿಮಯದ ಮೇಲಿನ ಒತ್ತಡ ಮತ್ತು ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಸವಾಲಾಗಿ ಪರಿಣಮಿಸಿದೆ.

ಭಾರತ ತನ್ನ ಒಟ್ಟು ಕಚ್ಚಾ ತೈಲ ಅವಶ್ಯಕತೆಯ ಸುಮಾರು 85% ಅನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಪ್ರತಿದಿನ ಭಾರತವು ಸುಮಾರು 5 ಮಿಲಿಯನ್ ಬ್ಯಾರೆಲ್ ತೈಲವನ್ನು ಬಳಸುತ್ತದೆ. ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿಯಿಂದ ಕಚ್ಚಾ ತೈಲದ ಬೆಲೆ ಕೇವಲ 10 ಡಾಲರ್ ಏರಿದರೂ ಭಾರತಕ್ಕೆ ವರ್ಷಕ್ಕೆ ಸುಮಾರು ₹1.5 ಲಕ್ಷ ಕೋಟಿ ಹೆಚ್ಚುವರಿ ಹೊರೆ ಬೀಳಬಹುದು ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಇದೇ ವೇಳೆ ಭಾರತವು ಜಗತ್ತಿನ ಅತಿ ದೊಡ್ಡ ಚಿನ್ನ ಖರೀದಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತ ವರ್ಷಕ್ಕೆ ಸುಮಾರು 800 ರಿಂದ 900 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಇದಕ್ಕಾಗಿ ಸುಮಾರು 45 ರಿಂದ 60 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ವಿನಿಮಯ ಖರ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಅನಗತ್ಯ ಚಿನ್ನ ಖರೀದಿ ಮತ್ತು ವಿದೇಶಿ ವೆಚ್ಚಗಳನ್ನು ಕಡಿಮೆ ಮಾಡುವುದರಿಂದ ದೇಶದ ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ರೂಪಾಯಿ ಮೌಲ್ಯ ಬಲವಾಗುತ್ತದೆ ಮತ್ತು ದೇಶದ ಆರ್ಥಿಕ ಸ್ಥಿರತೆ ಹೆಚ್ಚುತ್ತದೆ.

ಕೋವಿಡ್ ಸಮಯದಲ್ಲಿ ಭಾರತವು ವರ್ಕ್ ಫ್ರಮ್ ಹೋಮ್ ವ್ಯವಸ್ಥೆಯ ಮೂಲಕ ಇಂಧನ ಬಳಕೆ ಮತ್ತು ಅನಗತ್ಯ ಪ್ರಯಾಣವನ್ನು ಕಡಿಮೆ ಮಾಡಬಹುದು ಎಂಬುದನ್ನು ಈಗಾಗಲೇ ತೋರಿಸಿತ್ತು. ಕೋವಿಡ್ ಅವಧಿಯಲ್ಲಿ ನಗರಗಳಲ್ಲಿ ವಾಹನ ಸಂಚಾರವು ಸುಮಾರು 25% ರಿಂದ 40% ರವರೆಗೆ ಕಡಿಮೆಯಾಗಿತ್ತು. ಇದರ ಪರಿಣಾಮವಾಗಿ ಇಂಧನ ಬಳಕೆ ಮತ್ತು ಮಾಲಿನ್ಯ ಎರಡೂ ಇಳಿಕೆಯಾಗಿದ್ದವು. ಮತ್ತೆ ಕೆಲವು ಕ್ಷೇತ್ರಗಳಲ್ಲಿ ವರ್ಕ್ ಫ್ರಮ್ ಹೋಮ್ ಅನುಸರಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಇದರಿಂದ ದೇಶದ ತೈಲ ಆಮದು ವೆಚ್ಚವೂ ಇಳಿಯುತ್ತದೆ.

2025–26ರಲ್ಲಿ ಭಾರತವು ಸುಮಾರು 4 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಸಾಗುತ್ತಿದೆ ಮತ್ತು ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿದೆ. ಪ್ರಸ್ತುತ ಭಾರತದ ವಿದೇಶಿ ವಿನಿಮಯ ಸಂಗ್ರಹವು ಸುಮಾರು 640 ಬಿಲಿಯನ್ ಡಾಲರ್ ಮಟ್ಟದಲ್ಲಿದ್ದು, ಜಾಗತಿಕ ಅಸ್ಥಿರತೆಯ ಸಮಯದಲ್ಲಿ ಅದನ್ನು ರಕ್ಷಿಸುವುದು ದೇಶದ ಆರ್ಥಿಕ ಸ್ಥಿರತೆಗೆ ಅತ್ಯಂತ ಅಗತ್ಯವಾಗಿದೆ.

ಪ್ರಧಾನಮಂತ್ರಿಯವರ ಈ ಮನವಿ ಕೇವಲ ತಾತ್ಕಾಲಿಕ ಕ್ರಮವಲ್ಲ; ಅದು ದೀರ್ಘಕಾಲೀನ ಆರ್ಥಿಕ ಶಕ್ತಿಗಾಗಿ ಮಾಡಲಾದ ದೂರದೃಷ್ಟಿಯ ಯೋಜನೆಯಾಗಿದೆ. ಇದರ ಮೂಲಕ ವಿದೇಶಿ ವಿನಿಮಯ ಉಳಿಸಬಹುದು, ರೂಪಾಯಿ ಮೌಲ್ಯವನ್ನು ಬಲಪಡಿಸಬಹುದು,  ದೇಶೀಯ ಉತ್ಪಾದನೆಗೆ ಉತ್ತೇಜನ ಸಿಗಬಹುದು, “ಮೇಕ್ ಇನ್ ಇಂಡಿಯಾ”ಗೆ ಇನ್ನಷ್ಟು ಬಲ ಸಿಗಬಹುದು, ಆತ್ಮನಿರ್ಭರ ಭಾರತದ ಕನಸು ಇನ್ನಷ್ಟು ಗಟ್ಟಿಯಾಗಬಹುದು ಎಂದಿದ್ದಾರೆ. 

ಇತಿಹಾಸ ನೋಡಿದರೆ ಜಪಾನ್, ದಕ್ಷಿಣ ಕೊರಿಯಾ ಮತ್ತು ಚೀನಾ ಮುಂತಾದ ರಾಷ್ಟ್ರಗಳು ಸಂಕಷ್ಟದ ಸಮಯದಲ್ಲಿ ಜನಸಹಭಾಗಿತ್ವ, ಉಳಿತಾಯ ಮತ್ತು ದೇಶೀಯ ಉತ್ಪಾದನೆಗೆ ಒತ್ತು ನೀಡುವ ಮೂಲಕವೇ ಆರ್ಥಿಕ ಮಹಾಶಕ್ತಿಗಳಾಗಿ ಬೆಳೆದಿವೆ. ಭಾರತವೂ ಇಂದು ಆತ್ಮನಿರ್ಭರ ಭಾರತದ ದಿಕ್ಕಿನಲ್ಲಿ ಅದೇ ರೀತಿಯ ಜವಾಬ್ದಾರಿಯುತ ಹಾದಿಯಲ್ಲಿ ಸಾಗುತ್ತಿದೆ. ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿ ಕೇವಲ ಆ ಪ್ರದೇಶಕ್ಕೆ ಮಾತ್ರ ಸೀಮಿತವಲ್ಲ. ಅದರ ಪರಿಣಾಮ ಇಂಧನ ದರ, ವ್ಯಾಪಾರ, ಹಣದುಬ್ಬರ ಮತ್ತು ಜಾಗತಿಕ ಮಾರುಕಟ್ಟೆಗಳ ಮೂಲಕ ಪ್ರಪಂಚದ ಎಲ್ಲಾ ರಾಷ್ಟ್ರಗಳ ಮೇಲೂ ಬೀಳುತ್ತಿದೆ. ಇಂತಹ ಸಮಯದಲ್ಲಿ ಭಾರತ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವುದು ದೇಶದ ಭವಿಷ್ಯದ ಆರ್ಥಿಕ ಸುರಕ್ಷತಿಗಾಗಿ ಅಗತ್ಯವಾಗಿದೆ.

ಇವು ಯಾವುದೇ ಕಡ್ಡಾಯ ನಿಯಮಗಳಲ್ಲ; ದೇಶದ ಹಿತಕ್ಕಾಗಿ ಜನರಿಗೆ ನೀಡಲಾಗಿರುವ ದೇಶಭಕ್ತಿಯ ಮನವಿಗಳು. ಜನರ ಸಹಕಾರ ಮತ್ತು ಜವಾಬ್ದಾರಿಯುತ ನಡೆ ದೇಶದ ಆರ್ಥಿಕ ಬಲವನ್ನು ಇನ್ನಷ್ಟು ಹೆಚ್ಚಿಸಬಹುದು. ಇಂದು ಭಾರತವು ಜಗತ್ತಿನ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿದೆ. ಸರಿಯಾದ ನಾಯಕತ್ವ, ಜನರ ಸಹಕಾರ ಮತ್ತು ದೂರದೃಷ್ಟಿಯ ಆರ್ಥಿಕ ನೀತಿಗಳ ಮೂಲಕ ಭಾರತವು ಈ ಜಾಗತಿಕ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಆದ್ದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂದೇಶವನ್ನು ಕೇವಲ ತಾತ್ಕಾಲಿಕ ಮನವಿಯಾಗಿ ನೋಡಬಾರದು. ಇದು ದೇಶದ ಭವಿಷ್ಯದ ಆರ್ಥಿಕ ಸುರಕ್ಷತೆ, ರೂಪಾಯಿ ಮೌಲ್ಯದ ಬಲ, ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಆತ್ಮನಿರ್ಭರ ಭಾರತದ ನಿರ್ಮಾಣಕ್ಕಾಗಿ ನೀಡಲಾಗಿರುವ ರಾಷ್ಟ್ರೀಯ ಕರೆಯಾಗಿದೆ ಎಂದಿದ್ದಾರೆ. 

Ads on article

Advertise in articles 1

advertising articles 2

Advertise under the article