-->
ಬೆಳ್ತಂಗಡಿಯ ಗಡಾಯಿಕಲ್ಲು ಚಾರಣಕ್ಕೆ ಇಂದಿನಿಂದ ತಾತ್ಕಾಲಿಕ ನಿಷೇಧ

ಬೆಳ್ತಂಗಡಿಯ ಗಡಾಯಿಕಲ್ಲು ಚಾರಣಕ್ಕೆ ಇಂದಿನಿಂದ ತಾತ್ಕಾಲಿಕ ನಿಷೇಧ


ನಿರಂತರ ಮಳೆಯ ಕಾರಣದಿಂದಾಗಿ ಬೆಳ್ತಂಗಡಿ ತಾಲೂಕಿನ ಚಾರಣ ಪ್ರದೇಶ ಗಡಾಯಿಕಲ್ಲುವಿಗೆ ಪ್ರವೇಶ ನಿಷೇಧಿಸಲಾಗಿದೆ. ಕಲ್ಲುಗಳು ಜಾರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆ ಗಡಾಯಿಕಲ್ಲು ಚಾರಣಕ್ಕೆ ಅರಣ್ಯ ಇಲಾಖೆಯು ಇಂದಿನಿಂದ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿದೆ.

ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳ ಮಾಹಿತಿ ಪ್ರಕಾರ, ಮಳೆಯಿಂದಾಗಿ ಚಾರಣ ಮಾರ್ಗಗಳು ಅಪಾಯಕಾರಿಯಾಗಿದ್ದು, ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕಾ ಕ್ರಮವಾಗಿ ಜೂನ್ 14ರಿಂದ ಚಾರಣಕ್ಕೆ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ.

ಈ ಹಿಂದೆ ಜೂನ್ 1ರಿಂದ ಗಡಾಯಿಕಲ್ಲು ಚಾರಣಕ್ಕೆ ಅವಕಾಶ ನೀಡಲಾಗಿತ್ತು. ಅದರ ಬಳಿಕ ನೂರಾರು ಮಂದಿ ಪ್ರಕೃತಿ ಸೌಂದರ್ಯವನ್ನು ಸವಿಯಲು ಹಾಗೂ ಸಾಹಸ ಚಾರಣಕ್ಕಾಗಿ ಗಡಾಯಿಕಲ್ಲಿಗೆ ಭೇಟಿ ನೀಡಿದ್ದರು. ಭಾನುವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಚಾರಣಿಗರು ಆಗಮಿಸಿ ಚಾರಣ ನಡೆಸಿದ್ದರು.

ಆದರೆ ಮಳೆಯ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಕಲ್ಲುಗಳು ಜಾರುವ ಅಪಾಯ ಉಂಟಾಗಿರುವುದರಿಂದ ಮತ್ತೆ ನಿರ್ಬಂಧ ಹೇರಲಾಗಿದೆ. ಇದರಿಂದ ವಾರಾಂತ್ಯದಲ್ಲಿ ಚಾರಣಕ್ಕೆ ಯೋಜನೆ ರೂಪಿಸಿಕೊಂಡಿದ್ದ ಪ್ರವಾಸಿಗರು ಹಾಗೂ ಸಾಹಸ ಪ್ರಿಯರಿಗೆ ಭಾರೀ ನಿರಾಸೆಯಾಗಿದೆ.

ಹವಾಮಾನ ಪರಿಸ್ಥಿತಿ ಸುಧಾರಿಸಿ ಮಳೆ ಪ್ರಮಾಣ ಕಡಿಮೆಯಾದ ಬಳಿಕ ಚಾರಣಕ್ಕೆ ಪುನಃ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article