ಮಂಗಳೂರಿನ ರಸ್ತೆಬದಿ ಆಹಾರ ಮಳಿಗೆಗಳ ಮೇಲೆ ದಿಢೀರ್ ದಾಳಿ; ಅಜಿನೋಮೋಟೊ ಜಪ್ತಿ
Friday, July 24, 2026
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ನಗರದ ಪ್ರಮುಖ ರಸ್ತೆಬದಿ ಆಹಾರ ಮಳಿಗೆಗಳ ಮೇಲೆ ದಿಢೀರ್ ತಪಾಸಣೆ ನಡೆಸಿ, ಆಹಾರ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಪರಿಶೀಲನೆ ಕೈಗೊಂಡಿದ್ದಾರೆ.
ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪ ಕಾರ್ಯನಿರ್ವಹಿಸುತ್ತಿದ್ದ ರಸ್ತೆಬದಿ ತಿಂಡಿ-ತಿನಿಸುಗಳ ಮಳಿಗೆಗಳಿಗೆ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಆಹಾರಕ್ಕೆ ರುಚಿ ಹೆಚ್ಚಿಸುವ ಉದ್ದೇಶದಿಂದ ನಿಯಮಬಾಹಿರವಾಗಿ ಬಳಸಲಾಗುತ್ತಿದ್ದ ಸಾರ್ವಜನಿಕ ಆರೋಗ್ಯಕ್ಕೆ ಹಾನಿಕರವಾದ 'ಅಜಿನೋಮೋಟೊ' ಸಂಗ್ರಹವನ್ನು ಪತ್ತೆಹಚ್ಚಿ ಜಪ್ತಿ ಮಾಡಲಾಗಿದೆ.
ತಪಾಸಣೆ ವೇಳೆ ಅಧಿಕಾರಿಗಳು ಪ್ರತಿಯೊಂದು ಮಳಿಗೆಯಲ್ಲಿನ ಆಹಾರ ಪದಾರ್ಥಗಳು, ಸ್ವಚ್ಛತೆ, ಆಹಾರ ತಯಾರಿಕೆ ವಿಧಾನ ಹಾಗೂ ಬಳಸುತ್ತಿದ್ದ ಪದಾರ್ಥಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ನಿಯಮ ಉಲ್ಲಂಘಿಸಿ ಅಜಿನೋಮೋಟೊವನ್ನು ಅತಿಯಾಗಿ ಬಳಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಿತ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ನಗರದಲ್ಲಿ ಆಹಾರ ಸುರಕ್ಷತೆ ಕಾಪಾಡುವ ಉದ್ದೇಶದಿಂದ ಇಂತಹ ತಪಾಸಣೆಗಳು ಮುಂದುವರಿಯಲಿದ್ದು, ನಿಯಮ ಉಲ್ಲಂಘಿಸುವ ಆಹಾರ ಮಳಿಗೆಗಳ ವಿರುದ್ಧ ನಿರಂತರವಾಗಿ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ತಿಳಿಸಿದೆ.