ದ್ವಿಚಕ್ರ ವಾಹನಗಳ ಅಸಮರ್ಪಕ ಪಾರ್ಕಿಂಗ್: ಕಿನ್ನಿಮುಲ್ಕಿ–ಅಂಬಲಪಾಡಿ ರಸ್ತೆಯಲ್ಲಿ ಟ್ರಾಫಿಕ್ ಕಿರಿಕಿರಿ
Friday, September 11, 2026
ಉಡುಪಿಯ ಕಿನ್ನಿಮುಲ್ಕಿಯಿಂದ ಅಂಬಲಪಾಡಿವರೆಗೆ ಇರುವ ಸರ್ವಿಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದು, ಇದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಎಂ. ಇಕ್ಬಾಲ್ ಮನ್ನಾ ಒತ್ತಾಯಿಸಿದ್ದಾರೆ.
ಈ ಸರ್ವಿಸ್ ರಸ್ತೆಯಲ್ಲಿ ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಭಾರೀ ವಾಹನಗಳು ಸಂಚರಿಸುತ್ತಿದ್ದು, ರಸ್ತೆಯ ಬದಿಯಲ್ಲಿ ದ್ವಿಚಕ್ರ ವಾಹನಗಳನ್ನು ಸಾಲುಗಟ್ಟಿ ನಿಲ್ಲಿಸುವುದರಿಂದ ದೊಡ್ಡ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ವಾಹನಗಳು ಸಿಲುಕಿಕೊಳ್ಳುವ ಜೊತೆಗೆ ಪದೇಪದೇ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.
ಇದಲ್ಲದೆ, ಪ್ರತಿದಿನ ನಡೆಯುವ ಮೀನು ಮಾರುಕಟ್ಟೆಯ ಪ್ರವೇಶ ದ್ವಾರದಲ್ಲಿಯೂ ದ್ವಿಚಕ್ರ ವಾಹನಗಳನ್ನು ಅಸಮರ್ಪಕವಾಗಿ ನಿಲ್ಲಿಸಲಾಗುತ್ತಿದ್ದು, ಪ್ರವೇಶ–ನಿರ್ಗಮನಕ್ಕೆ ತೊಂದರೆಯಾಗುತ್ತಿದೆ. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಮತ್ತಷ್ಟು ಅನಾನುಕೂಲ ಉಂಟಾಗಿದೆ.
ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಸರ್ವಿಸ್ ರಸ್ತೆಯಲ್ಲಿ ಅನಧಿಕೃತ ಹಾಗೂ ಅಸಮರ್ಪಕವಾಗಿ ನಿಲ್ಲಿಸಿರುವ ದ್ವಿಚಕ್ರ ವಾಹನಗಳನ್ನು ತೆರವುಗೊಳಿಸಬೇಕು. ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಂಡು, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಎಂ. ಇಕ್ಬಾಲ್ ಮನ್ನಾ ಒತ್ತಾಯಿಸಿದ್ದಾರೆ.
