ಹೃದಯಾಘಾತ ಪ್ರಕರಣಗಳ ತನಿಖೆಗೆ ಸಮಿತಿ ರಚನೆ, 10ದಿನಗಳಲ್ಲಿ ವರದಿ ಸಲ್ಲಿಕೆಗೆ ಸೂಚನೆ
Tuesday, July 01, 2025
ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದೆ. ಸುಮಾರು 18ಕ್ಕೂ ಅಧಿಕ ಹೃದಯಾಘಾತ ಪ್ರಕರಣಗಳು ಈಗಾಗಲೇ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಹೃದಯಾಘಾತ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ 10 ದಿನಗಳ ಒಳಗಾಗಿ ವರದಿ ನೀಡುವಂತೆ ಜಯದೇವ ಹೃದ್ರೋಗ ವಿಜ್ಞಾನಗಳ ಮತ್ತು ಸಂಶೋಧನ ಸಂಸ್ಥೆ ಪ್ರಭಾರ ನಿರ್ದೇಶಕ ಡಾ. ಕೆ.ಎಸ್ ರವೀಂದ್ರನಾಥ್ ನೇತೃತ್ವದ ಸಮಿತಿಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಸೂಚಿಸಿದ್ದಾರೆ.
ಕೋವಿಡ್ ನಂತರದ ವೈದ್ಯಕೀಯ ದುಷ್ಪರಿಣಾಮಗಳ ಕುರಿತು ಇದೇ ಸಮಿತಿ ಅಧ್ಯಯನ ನಡೆಸುತ್ತಿದೆ. ಇದೀಗ ಹಾಸನ ಜಿಲ್ಲೆಯಲ್ಲೂ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಅಧ್ಕಯನ ನಡೆಸುವ ಹೊಣೆಗಾರಿಕೆಯನ್ನೂ ಈ ಸಮಿತಿಗೆ ನೀಡಲಾಗಿದೆ. ಹೃದಯಾಘಾತದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದ್ದು, ಹಾಸನದ 3 ತಾಲೂಕುಗಳಲ್ಲಿ ಸ್ಟೆಮಿ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. ಹಾಸನ ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲೂಕುಗಳಲ್ಲಿ ಸ್ಟೆಮಿ ಕಾರ್ಯಕ್ರಮ ಅನುಷ್ಠಾನದಲ್ಲಿದೆ. ಹೃದಯಾಘಾತಕ್ಕೆ ಒಳಗಾದವರನ್ನು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಾಗ ಇಸಿಜಿ ಮಾಡುವಾಗಲೇ ಜಯದೇವ ಹೃದ್ರೋಗ ಸಂಸ್ಥೆಗೆ ಸಂದೇಶ ರವಾನೆಯಾಗುತ್ತದೆ. ಜಯದೇವ ಆಸ್ಪತ್ರೆಯ ತಜ್ಞ ವೈದ್ಯರು ತಾಲೂಕು ಆಸ್ಪತ್ರೆಗಳ ವೈದ್ಯರಿಗೆ ಯಾವ್ಯಾವ ತುರ್ತು ಚಿಕಿತ್ಸೆ ನೀಡಬೇಕೆಂದು ಮಾಹಿತಿ ನೀಡುತ್ತಾರೆ. ಇದೇ ಸ್ಟೆಮಿ ವ್ಯವಸ್ಥೆ.