
Kaup: ಮನೆ ಕಳ್ಳತನ ಪ್ರಕರಣ; ಕುಖ್ಯಾತ ಕಳ್ಳನ ಬಂಧನ
ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಅಂತರ್ ಜಿಲ್ಲಾ ಕಳ್ಳನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕುಖ್ಯಾತ ಅಂತರ್ ಜಿಲ್ಲಾ ಕಳ್ಳ ಅಬೂಬಕ್ಕರ್ ಯಾನೆ ಅಬ್ದುಲ್ ಖಾದರ್ (ಇತ್ತೆ ಬರ್ಪೆ ಅಬುಬಕ್ಕರ್) ಎಂದು ಗುರುತಿಸಲಾಗಿದೆ.
ಜೂನ್ 27ರಂದು ರಾತ್ರಿ ವೇಳೆ ಶಿರ್ವ ಗ್ರಾಮದ ಮಟ್ಟಾರು ರಸ್ತೆ ಬಳಿ ಇರುವ ಪವಿತ್ರ ಪೂಜಾರ್ತಿಯವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಸುಮಾರು 137 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್. ನಾಯ್ಕ್, ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಂವದಾ ನೇತೃತ್ವದಲ್ಲಿ, ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಎಸ್. ಮಾನೆ ನೇತೃತ್ವದ ತಂಡ ಪತ್ತೆ ಕಾರ್ಯಾಚರಣೆ ನಡೆಸಿತ್ತು.
ಕುಖ್ಯಾತ ಅಂತರ್ ಜಿಲ್ಲಾ ಕಳ್ಳ ಅಬೂಬಕ್ಕರ್ @ ಅಬ್ದುಲ್ ಖಾದರ್ @ ಇತ್ತೆ ಬರ್ಪೆ ಅಬುಬಕ್ಕರ್ ನನ್ನು ದಸ್ತಗಿರಿ ಮಾಡಿ, ಆತನಿಂದ ಒಟ್ಟು 66.760 ಗ್ರಾಂ ತೂಕದ ಚಿನ್ನಾಭರಣಗಳನ್ನು ಮತ್ತು ಕೃತ್ಯದ ವೇಳೆ ಪ್ರಯಾಣಕ್ಕೆ ಬಳಸಿದ ಜುಪಿಟರ್ ಸ್ಕೂಟರನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ ರೂ. 7,00,000 ಆಗಿರುತ್ತದೆ. ಈ ಆರೋಪಿಯ ವಿರುದ್ಧ ಸುಮಾರು 30ಕ್ಕಿಂತ ಹೆಚ್ಚು ಕಳವು ಪ್ರಕರಣಗಳು ದಾಖಲಾಗಿರುತ್ತವೆ.