ಆಂಧ್ರಕ್ಕೆ ಮೊಂಥಾ ಸೈಕ್ಲೋನ್; ಶಾಲೆ, ಕಾಲೇಜಿಗೆ ರಜೆ; ರೈಲು, ವಿಮಾನಯಾನ ಬಂದ್
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮೊಂಥಾ ಚಂಡ ಮಾರುತ ಇಂದು (ಅ.28) ಸಂಜೆ ಅಥವಾ ರಾತ್ರಿ ಕಾಕಿನಾಡದ ಸುತ್ತಮುತ್ತಲಿನ ಆಂಧ್ರಪ್ರದೇಶದ ಮಚಲಿಪಟ್ಟಣ ಮತ್ತು ಕಳಿಂಗಪಟ್ಟಣ ನಡುವೆ ಅಪ್ಪಳಿಸಲಿದೆ. ಗರಿಷ್ಠ ಗಾಳಿಯ ವೇಗ ಗಂಟೆಗೆ 90- 100 ಕಿ.ಮೀ. ವೇಗದಲ್ಲಿ ಬೀಸಲಿದೆ. ಈ ಕಾರಣದಿಂದ ಆಂಧ್ರಪ್ರದೇಶದಾದ್ಯಂತ 65 ಕ್ಕೂ ಹೆಚ್ಚು ಪ್ಯಾಸೆಂಜರ್ ಮತ್ತು ಎಕ್ಸ್ಪ್ರೆಸ್ ರೈಲುಗಳ ಸೇವೆ ಮತ್ತು ವಿಮಾಣ ಸೇವೆಗಳನ್ನು ರದ್ದುಗೊಳಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆಯು ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಿದೆ. ಆಂಧ್ರ ಕರಾವಳಿ ಭಾಗ ಸಮೀಪಿಸುತ್ತಿರುವ ಚಂಡಮಾರುತ ಪ್ರಭಾವದಿಂದಾಗಿ ಭಾರೀ ಮಳೆ ಸುರಿಯುತ್ತಿದೆ. ರಾಜ್ಯದ 16 ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಆಂಧ್ರದ ಶಾಲಾ ಕಾಲೇಜುಗಳಿಗೆ ಇಂದು(ಅ. 28) ಮತ್ತು ಅ. 29ರಂದು ರಜೆ ಘೋಷಿಸಲಾಗಿದೆ. ಚಂಡಮಾರುತ ಅಪ್ಪಳಿಸುವ ಪ್ರದೇಶದ ನಿವಾಸಿಗಳನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲು ಸಿಎಂ ಚಂದ್ರಬಾಬು ನಾಯ್ಡು ಸೂಚನೆ ನೀಡಿದ್ದಾರೆ.
ಕಾಕಿನಾಡ ಮತ್ತು ಕೊನಸೀಮಾ ಪ್ರದೇಶದಲ್ಲಿ ಸುಮಾರು 10,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. 126 ಗರ್ಭಿಣಿಯರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. "ರೆಡ್ ಅಲರ್ಟ್" ಘೋಷಿಸಲಾದ ಎಂಟು ದಕ್ಷಿಣ ಜಿಲ್ಲೆಗಳಲ್ಲಿ ಒಡಿಶಾ ಸರ್ಕಾರವು ನೆರವಿಗೆ ಧಾವಿಸಿದೆ. ಬೇರೆಡೆ ಸ್ಥಳಾಂತರ ಮಾಡಲು ಮುಂದಾಗಿದೆ. ಭಾರೀ ಮಳೆ ಮಾತ್ರವಲ್ಲದೇ ಬಿರುಗಾಳಿಯ ವೇಗ ಸಹ ಹೆಚ್ಚಾಗಲಿದೆ. ಇದು ಜನಸಾಮಾನ್ಯರ ಜೀವನ ಅಸ್ತವ್ಯಸ್ಥ ಮಾಡಿದೆ
ಪೂರ್ವ ಕರಾವಳಿ ರೈಲ್ವೆ ವಾಲ್ಟೇರ್ ಪ್ರದೇಶ ಮತ್ತು ಸಂಬAಧಿತ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ಹಲವಾರು ಕೋಚಿಂಗ್ ರೈಲುಗಳ ರದ್ದತಿ, ಮಾರ್ಗ ಬದಲಾವಣೆ ಮಾಡಲಾಗಿದೆ. ಸುಮಾರು 32 ರೈಲುಗಳನ್ನು ರದ್ದುಪಡಿಸಲಾಗಿದೆ. ಚಂಡಮಾರುತದ ಕಾರಣದಿಂದಾಗಿ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿಯ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು, ದಕ್ಷಿಣ ಮಧ್ಯ ರೈಲ್ವೆ ಅಕ್ಟೋಬರ್ 27 ಮತ್ತು 28 ರ ನಡುವೆ ಪ್ರಯಾಣಿಕರು ತೀರಾ ಅಗತ್ಯವಿದ್ದರೆ ಮಾತ್ರ ಪ್ರಯಾಣಿಸುವಂತೆ ಸೂಚಿಸಿದೆ. ಪ್ಯಾಸೆಂಜರ್ ಹಾಗೂ ಎಕ್ಸ್ಪ್ರೆಸ್ ಸೇರಿ ಒಟ್ಟು 65 ರೈಲುಗಳು ರದ್ದುಗೊಳಿಸಲಾಗಿದೆ. ಇದರಿಂದಾಗಿ ವಿಜಯವಾಡ, ರಾಜಮಂಡ್ರಿ, ಕಾಕಿನಾಡ, ವಿಶಾಖಪಟ್ಟಣ ಮತ್ತು ಭೀಮಾವರಂ ಮೂಲಕ ಪ್ರಮುಖ ಮಾರ್ಗಗಳಲ್ಲಿ ರೈಲು ಸಂಚಾರ ವ್ಯತ್ಯಯವಾಗಲಿದೆ.
ಹವಾಮಾನ ಪರಿಸ್ಥಿತಿಗಳು ಸುಧಾರಿಸಿದ ನಂತರ ಸಂಪೂರ್ಣ ಸುರಕ್ಷತೆ, ಮುನ್ಸೂಚನೆ ನೋಡಿಕೊಂಡು ಪುನಃ ರೈಲುಗಳು ಓಡಾಟ ಆರಂಭಿಸಲಿವೆ. ಪೂರ್ವ ಕರಾವಳಿ ರೈಲ್ವೆ ಒಡಿಶಾ-ಆಂಧ್ರ ಕಾರಿಡಾರ್ನಾದ್ಯಂತ ಅನೇಕ ರೈಲು ಸೇವೆಗಳು ಮುಂದಿನ ಆದೇಶವರೆಗೆ ಸ್ಥಗಿತಗೊಂಡಿವೆ ಎಂದು ರೈಲ್ವೆ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಬಿರುಗಾಳಿ ಮಳೆ ಮುನ್ಸೂಚನೆ ಕಾರಣಕ್ಕೆ ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಅಕ್ಟೋಬರ್ 28 ರಂದು ವಿಶಾಖಪಟ್ಟಣ ವಿಮಾನ ನಿಲ್ದಾಣದಲ್ಲಿ ನಿಗದಿಯಾಗಿದ್ದ ಎಲ್ಲಾ ಇಂಡಿಗೊ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಸೇವೆಗಳು ರದ್ದುಗೊಂಡಿವೆ. ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ವಿಮಾನದ ಸ್ಥಿತಿಯನ್ನು ಪರಿಶೀಲಿಸಿ ತೆರಳುವಂತೆ ಏರ್ಪೋರ್ಟ್ ಆಡಳಿತ ಮಂಡಳಿ ಪ್ರಯಾಣಿಕರಿಗೆ ಮಹತ್ವದ ಸೂಚನೆ ನೀಡಿದೆ.

