-->
 ಮೊಬೈಲ್‌ಗಳಲ್ಲಿ ಇನ್ನು ಮುಂದೆ 'ಸಂಚಾರ್ ಸಾಥಿ' ಆಪ್ ಅಳವಡಿಕೆ ಕಡ್ಡಾಯ

ಮೊಬೈಲ್‌ಗಳಲ್ಲಿ ಇನ್ನು ಮುಂದೆ 'ಸಂಚಾರ್ ಸಾಥಿ' ಆಪ್ ಅಳವಡಿಕೆ ಕಡ್ಡಾಯ


ಎಲ್ಲಾ ಹೊಸ ಮೊಬೈಲ್ ಫೋನ್‌ಗಳಲ್ಲಿ ಇನ್ನು ‘ಸಂಚಾರ್ ಸಾಥಿ’ ಆಪ್ ಅಳವಡಿಕೆ ಕಡ್ಡಾಯಗೊಳಿಸುವಂತೆ ದೂರಸಂಪರ್ಕ ಇಲಾಖೆ ಮೊಬೈಲ್ ಕಂಪನಿಗಳಿಗೆ ನಿರ್ದೇಶನ ನೀಡಿದೆ. 


ದೇಶದಲ್ಲಿ ತಯಾರಿಸಲಾಗುತ್ತಿರುವ ಅಥವಾ ಆಮದು ಮಾಡಿಕೊಳ್ಳುವ ಎಲ್ಲಾ ಹೊಸ  Smart ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಮೊದಲೇ ಅಳವಡಿಸುವುದು ಕಡ್ಡಾಯವಾಗಿದೆ. ಈ ನಿಯಮವನ್ನು ಜಾರಿಗೆ ತರಲು ಕಂಪನಿಗಳಿಗೆ 90 ದಿನಗಳ ಕಾಲಾವಕಾಶ ನೀಡಲಾಗಿದೆ.

ನವೆಂಬರ್ 28 ರಂದು ಹೊರಡಿಸಲಾದ ಮಾರ್ಗಸೂಚಿಗಳ ಪ್ರಕಾರ, 90 ದಿನಗಳ ನಂತರ ಪ್ರಾರಂಭಿಸಿ, ಭಾರತಕ್ಕೆ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಎಲ್ಲಾ ಮೊಬೈಲ್ ಫೋನ್‌ಗಳು ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಮೊದಲೇ ಹೊಂದಿರಬೇಕು. ಫೋನ್ ಸೆಟಪ್ ಸಮಯದಲ್ಲಿ ಈ ಅಪ್ಲಿಕೇಶನ್ ಸುಲಭವಾಗಿ ಕಾಣಿಸಬೇಕು ಮತ್ತು ಅದನ್ನು ತೆಗೆದುಹಾಕಲು ಅಥವಾ ನಿಷ್ಕ್ರಿಯಗೊಳಿಸಲು ಸಾಧ್ಯವಾಗುವಂತೆ ಇಡಬಾರದು. ಈ ನಿಯಮವು ಆಪಲ್, ಸ್ಯಾಮ್‌ಸಂಗ್, ಗೂಗಲ್, ಶಿಯೋಮಿ, ವಿವೋ ಅಥವಾ ಯಾವುದೇ ಇತರ ಬ್ರ‍್ಯಾಂಡ್ ಆಗಿರಲಿ ಎಲ್ಲಾ ಕಂಪನಿಗಳಿಗೆ ಅನ್ವಯಿಸುತ್ತದೆ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ.

ಅಪ್ಲಿಕೇಶನ್‌ಗಳನ್ನು ಬಳಕೆದಾರರು ಆಂಡ್ರಾಯ್ಡ್ ಅಥವಾ ಆಪಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಆದರೆ ಪ್ರಿಲೋಡೆಡ್ ಅಪ್ಲಿಕೇಶನ್‌ಗಳು ಫೋನಿನ ಜೊತೆಗೆ ಬರುತ್ತವೆ. ಐಫೋನ್ ಅಥವಾ ಆಂಡ್ರಾಯ್ಡ್ ಫೋನ್ ಖರೀದಿಸುವಾಗ ಆಪಲ್ ಕಂಪನಿ ಅಥವಾ ಗೂಗಲ್ ಕಂಪನಿಯ ಕೆಲವು ಅಪ್ಲಿಕೇಶನ್‌ಗಳು ಪ್ರಿಲೋಡೆಡ್ ಆಗಿ ಬರುತ್ತವೆ. ಇದರ ಜೊತೆ ಫೋನ್ ತಯಾರಕ ಕಂಪನಿಯ ಕೆಲ ಅಪ್ಲಿಕೇಶನ್‌ಗಳು ಇರುತ್ತವೆ. ಈ ಅಪ್ಲಿಕೇಶನ್‌ಗಳನ್ನು ಯಾವುದೇ ಕಾರಣಕ್ಕೂ ಅನ್ ಇನ್‌ಸ್ಟಾಲ್ ಮಾಡಲು ಸಾಧ್ಯವಾಗುವುದಿಲ್ಲ.

ಸಂಚಾರ್ ಸಾಥಿ ಪೋರ್ಟಲ್ ಅನ್ನು ಮೇ 2023 ರಲ್ಲಿ ತೆರೆಯಲಾಗಿದ್ದು ಅದರ ಮುಂದುವರಿದ ಭಾಗವಾಗಿ ಈ ಆಪ್ ಅಭಿವೃದ್ಧಿಪಡಿಸಲಾಗಿದೆ. ಈ  ಜನವರಿಯಲ್ಲಿ ದೂರಸಂಪರ್ಕ ಇಲಾಖೆಯು ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ ಈ ಆಪ್ ಅನ್ನು ಬಿಡುಗಡೆ ಮಾಡಿತ್ತು. ಈ ಆಪ್ ಅನ್ನು ಇನ್‌ಸ್ಟಾಲ್ ಮಾಡಿದ ಬಳಿಕ ಮೊಬೈಲ್ ಕಳ್ಳತನವಾದರೆ ಅಥವಾ ಕಳೆದುಹೋದರೆ ಬ್ಲಾಕ್ ಮಾಡಬಹುದು. ಅಷ್ಟೇ ಅಲ್ಲದೇ ಈ ಫೋನ್ ದೇಶದ ಬೇರೆ ಕಡೆ ಬಳಕೆಯಾಗುತ್ತಿದ್ದರೂ ಕಾನೂನು ಸಂಸ್ಥೆಗಳಿಗೆ ಎಲ್ಲಿ ಈ ಫೋನ್ ಸಕ್ರಿಯವಾಗಿದೆ ಎಂಬ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ. ಸೈಬರ್ ಅಪರಾಧ, ನಕಲಿ ಐಇಎಂಐ ಸಂಖ್ಯೆ ಬಳಸಿ ನಡೆಸುವ ಕೃತ್ಯವನ್ನು ತಡೆಗಟ್ಟಲು ಇದು ಸಹಕಾರಿಯಾಗಿದೆ.

ಈಗಾಗಲೇ ತಯಾರಿಸಲಾದ ಅಥವಾ ಪ್ರಸ್ತುತ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿರುವ ಮೊಬೈಲ್ ಫೋನ್‌ಗಳು ಸಹ ಈ ಅಪ್ಲಿಕೇಶನ್ ಅನ್ನು ಸೇರಿಸಬೇಕಾಗುತ್ತದೆ. ಕಂಪನಿಗಳು ಸಾಫ್ಟ್ವೇರ್ ನವೀಕರಣಗಳ ಮೂಲಕ ಸಂಚಾರ ಸಾಥಿ ಅಪ್ಲಿಕೇಶನ್ ಅನ್ನು ಲಭ್ಯವಾಗುವಂತೆ ಮಾಡಬೇಕಾಗುತ್ತದೆ.

ತಯಾರಕರು ಮತ್ತು ಆಮದುದಾರರು ಈ ಆದೇಶವನ್ನು ಪಾಲಿಸಬೇಕು ಮತ್ತು 120 ದಿನಗಳಲ್ಲಿ ದೂರಸಂಪರ್ಕ ಇಲಾಖೆಗೆ ವರದಿಯನ್ನು ಸಲ್ಲಿಸಬೇಕಾಗುತ್ತದೆ. ಸಂಚಾರಿ ಸಾಥಿ ವೆಬ್‌ಸೈಟ್ ಪ್ರಕಾರ ಇಲ್ಲಿಯವರೆಗೆ 42.14 ಲಕ್ಷಕ್ಕೂ ಹೆಚ್ಚು ಮೊಬೈಲ್‌ಗಳನ್ನು ನಿರ್ಬಂಧಿಸಲಾಗಿದೆ ಮತ್ತು 26.11 ಲಕ್ಷಕ್ಕೂ ಹೆಚ್ಚು ಕಳೆದುಹೋದ ಅಥವಾ ಕದ್ದ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಪತ್ತೆಹಚ್ಚಲಾಗಿದೆ.

ಸಂಚಾರ್ ಸಾಥಿ ಅಪ್ಲಿಕೇಶನ್ ಮೊಬೈಲ್ ಭದ್ರತಾ ಸಮಸ್ಯೆಗಳನ್ನು ತಡೆಗಟ್ಟಲು ವಿನ್ಯಾಸಗೊಳಿಸಲಾಗಿದೆ. ಈ ಅಪ್ಲಿಕೇಶನ್ ಬಳಸಿ, ನೀವು ನಿಮ್ಮ ಮೊಬೈಲ್‌ನ IMEI ಸಂಖ್ಯೆಯನ್ನು ಪರಿಶೀಲಿಸಬಹುದು.IMEI ಸಂಬ0ಧಿಸಿದ ಯಾವುದೇ ವಂಚನೆಯನ್ನು ನೀವು ವರದಿ ಮಾಡಬಹುದು. ಅಪ್ಲಿಕೇಶನ್ ಬಳಸಿ ಕಳೆದುಹೋದ ಅಥವಾ ಕದ್ದ ಫೋನ್ ಅನ್ನು ಸಹ ನೀವು ವರದಿ ಮಾಡಬಹುದು.

ಐಎಂಇಐ ಸಂಖ್ಯೆಯನ್ನು ನಕಲು ಮಾಡಿಕೊಂಡು ಬೇರೆ ದೇಶದಲ್ಲಿ ಕೂತು ಸೈಬರ್ ಅಪರಾಧ ಬ್ಯಾಂಕ್ ಖಾತೆ ಬಳಿಕೆ ಸೇರಿದಂತೆ ಹಲವು ಅಕ್ರಮ ಎಸಗಲಾಗುತ್ತದೆ. ಮೊಬೈಲ್ ಖರೀದಿಸುವವರು ಖರೀದಿಗೂ ಮುನ್ನ ಈ ಆಪ್ ಮೂಲಕ ತಾವು ಖರೀದಿಸುವ ಐಎಂಇಐ ಸಂಖ್ಯೆಯನ್ನು ಪರಿಶೀಲಿಸಿಕೊಳ್ಳಬಹುದು. ತಮ್ಮ ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಬಳಸಿಕೊಂಡು ಅಕ್ರಮವಾಗಿ ಸಿಮ್ ಖರೀದಿ ಮಾಡಲಾಗಿದ್ದರೆ ಈ ಆಪ್ ಮೂಲಕ ಅಂಥ ಅಕ್ರಮ ಸಂಪರ್ಕವನ್ನು ನಿಷ್ಕ್ರಿಯ ಮಾಡಬಹುದು. ಈ ಆದೇಶವನ್ನು ಪಾಲಿಸಲಿದ್ದರೆ ದೂರಸಂಪರ್ಕ ಕಾಯ್ದೆ 2023 ಮತ್ತು ದೂರಸಂಪರ್ಕ ಸೈಬರ್ ಭದ್ರತಾ ನಿಯಮಗಳು 2024 ಮತ್ತು ಇತರೆ ಕಾಯ್ದೆಗಳ ಅನ್ವಯ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.

ಈ ಅಪ್ಲಿಕೇಶನ್‌ಗಳು ಬಳಕೆದಾರರ ಸಕ್ರಿಯ ಸಿಮ್ ಕಾರ್ಡ್ಗೆ ನಿರಂತರವಾಗಿ ಲಿಂಕ್ ಆಗಿರಬೇಕು. ಅಪ್ಲಿಕೇಶನ್‌ಗಳ ವೆಬ್ ಆವೃತ್ತಿಗಳು ಪ್ರತಿ ಆರು ಗಂಟೆಗಳಿಗೊಮ್ಮೆ ಸ್ವಯಂಚಾಲಿತವಾಗಿ ಲಾಗ್ ಔಟ್ ಆಗುತ್ತವೆ. ಮತ್ತೆ ಲಾಗಿನ್ ಆಗಲು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಸಾಧನವನ್ನು ಮರು-ಲಿಂಕ್ ಮಾಡಬೇಕಾಗುತ್ತದೆ. ಈ ಕಂಪನಿಗಳು 120 ದಿನಗಳಲ್ಲಿ ಆಡಿಟ್ ವರದಿಯನ್ನು ಸಲ್ಲಿಸಬೇಕಾಗುತ್ತದೆ.










Ads on article

Advertise in articles 1

advertising articles 2

Advertise under the article