ಚಂಡೀಘಡದಲ್ಲಿ ಅಪಘಾತ: ಕಾಪುವಿನ ತಾಯಿ, ಮಗು ಮೃತ್ಯು
ಚಂಡೀಘಡದ ಬಳಿ ನಡೆದ ಕಾರು ಅಪಘಾತದಲ್ಲಿ ಕಾಪು ಮೂಲದ ತಾಯಿ ಮಗು ಮೃತಪಟ್ಟ ಘಟನೆ ನಡೆದಿದೆ.
ಉಡುಪಿ - ಕಾಪು ಉಳಿಯಾರಗೋಳಿ ಮೂಲದ ಸಂಜನಾ (27) ಮತ್ತು ಅವರ ಎಂಟು ತಿಂಗಳು ಪ್ರಾಯದ ಮಗು ಸ್ಥಿತಿಕ್ ಮೃತಪಟ್ಟಿದ್ದು ಅವರ ಪತಿ ಕಾರ್ತಿಕ್ ಮತ್ತು ಜತೆಗಿದ್ದ ಮತ್ತೊಂದು ಕುಟುಂಬ ಅಪಾಯದಿಂದ ಪಾರಾಗಿದೆ.
ಉಡುಪಿ ಮತ್ತು ಕಾಪುವಿನಿಂದ ಹೊರಟ ಎರಡು ಕುಟುಂಬಗಳು ದೆಹಲಿಯವರೆಗೆ ವಿಮಾನದ ಮೂಲಕ ತೆರಳಿ ಅಲ್ಲಿಂದ ಚಂಡೀಘಡ ಮಾರ್ಗವಾಗಿ ಮನಾಲಿಗೆ ಟ್ಯಾಕ್ಸಿಯಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಎರಡು ಕುಟುಂಬಗಳು ಕಾರಿನಲ್ಲಿ ತೆರಳುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿ ನಿಂತಿದ್ದ ಟ್ಯಾಂಕರ್ ಗೆ ಢಿಕ್ಕಿ ಹೊಡೆದಿತ್ತು. ಮಗುವಿನ ಮೃತದೇಹವನ್ನು ಕಾಪು ಕೈಪುಂಜಾಲಿಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿದ್ದು ಸಂಜನಾ ಅವರ ಮೃತದೇಹ ಒಂದೆರಡು ದಿನಗಳಲ್ಲಿ ಕೈಪುಂಜಾಲಿಗೆ ಆಗಮಿಸುವ ನಿರೀಕ್ಷೆಯಿದೆ.
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಸಂಜನಾ ಮತ್ತು ಅವರ ಮಗು ತೀವ್ರ ಗಾಯಗೊಂಡಿತ್ತು. ಅಪಘಾತವಾದ ಎರಡು ದಿನದಲ್ಲಿ ಮಗು ಮೃತಪಟ್ಟಿತ್ತು. ಸಂಜನಾ ಅವರಿಗೆ ತಲೆಗೆ ಗಂಭೀರ ಏಟಾಗಿದ್ದು ತೀವ್ರ ಗಾಯಗೊಂಡು ಕೋಮಾವಸ್ಥೆಗೆ ಹೋಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.