ಮೂಡೆ ಕಟ್ಟುವುದನ್ನೇ ಲಾಭದಾಯಕ ವೃತ್ತಿಯನ್ನಾಗಿಸಿದ ಕುಟುಂಬ (Video)
ಕರಾವಳಿ ಭಾಗದ ಸಾಂಪ್ರದಾಯಿಕ ತಿಂಡಿ ತಿನಿಸುಗಳಲ್ಲಿ ಮೂಡೆಯೂ ಒಂದು. ಇಂದಿಗೂ ಹಬ್ಬ ಹರಿದಿನಗಳಲ್ಲಿ ಕರಾವಳಿಯಲ್ಲಿ ಮೂಡೆ ಇದ್ದೇ ದಿನ. ಹಬ್ಬ ಹರಿದಿನ ಮಾತ್ರವಲ್ಲದೇ ಎಲ್ಲಾ ಸಮಯದಲ್ಲೂ ಮೂಡೆಗೆ ಬೇಡಿಕೆ ಹೆಚ್ಚಿರುವುದರಿಂದ ಉಡುಪಿಯಲ್ಲಿ ಸುಮತಿ ಎಂಬವರ ಕುಟುಂಬ ಮೂಡೆ ಮಾರಾಟವನ್ನೇ ಲಾಭದಾಯಕ ವೃತ್ತಿಯನ್ನಾಗಿಸಿದೆ.
ಕೇದಗೆ ಎಲೆ ಅಥವಾ ಮುಂಡೇವು ಗಿಡ ಎಲೆಗಳಿಂದ ಮೂಡೆಯನ್ನು ತಯಾರಿಸಲಾಗುತ್ತದೆ. ಮೊದಲೆಲ್ಲಾ ಹರಿದಿನಗಳಿಗೆ ಮನೆಯಲ್ಲೇ ಮೂಡೆಯನ್ನು ಕಟ್ಟಲಾಗುತ್ತಿತ್ತು. ಆದರೆ ಈಗ ಮಾರುಕಟ್ಟೆಯಲ್ಲೇ ಖರೀದಿಸಿ ಮೂಡೆ ತಿಂಡಿ ಮಾಡುತ್ತಾರೆ.
ಉಡುಪಿಯ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಸಂಚರಿಸಿದರೆ ಸಾಂಪ್ರದಾಯಿಕ ಭಕ್ಷö್ಯ ಭೋಜನಗಳಿಗೆ ಬೇಕಾಗುವ ವಸ್ತುಗಳು ಸಿಗುತ್ತವೆ. ಮೂಡೆಗೆ ಬೇಡಿಕೆ ಇರುವುದರಿಂದಾಗಿ ಕೆಲವು ಕುಟುಂಬ ಇದನ್ನೇ ವೃತ್ತಿಯನ್ನಾಗಿಸಿದೆ.
ಸುಮತಿ ಎಂಬವರು ಪ್ರತೀ ದಿನ ಶ್ರೀಕೃಷ್ಣ ಮಠದ ಸಮೀಪ ಮೂಡೆ ಕಟ್ಟಿ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ದಿನವೊಂದಕ್ಕೆ 500ರಷ್ಟು ಮೂಟೆ ಕಟ್ಟುತ್ತಾರೆ. ಹಬ್ಬ ಹರಿದಿನಗಳಾದ ಚೌತಿ ಅಷ್ಟಮಿ ಇನ್ನಿತರ ಸಮಯದಲ್ಲಿ ಕೊಂಚ ಬೇಡಿಕೆ ಜಾಸ್ತಿ ಇರುತ್ತದೆ ಎನ್ನುತ್ತಾರೆ ಸುಮತಿ ಅವರು. ಮೂಡೆ ಕಟ್ಟಿ ಮಾರಾಟ ಮಾಡುತ್ತಿರುವುದರಿಂದ ಈವರೆಗೆ ವ್ಯಾಪಾರದಲ್ಲಿ ನಷ್ಟವಾಗಿಲ್ಲ. ಹೋಟೇಲ್ ಗಳಿಗೂ ದಿನ ನಿತ್ಯ ಮೂಡೆ ಬೇಕಾಗುತ್ತದೆ. ಹಾಗಾಗಿ ಮೂಡೆ ವ್ಯಾಪಾರ ನಮ್ಮ ಕೈಹಿಡಿದಿದೆ ಎಂದು ವ್ಯಾಪಾರಿ ಮಹಿಳೆ ಸುಮತಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.