-->
2022ರ ಕುಕ್ಕರ್ ಸ್ಫೋಟ ಪ್ರಕರಣ; ತಪ್ಪೊಪ್ಪಿಕೊಂಡ ಶಾರೀಕ್, ಎ.10ರಂದು ಶಿಕ್ಷೆ ಪ್ರಕಟ

2022ರ ಕುಕ್ಕರ್ ಸ್ಫೋಟ ಪ್ರಕರಣ; ತಪ್ಪೊಪ್ಪಿಕೊಂಡ ಶಾರೀಕ್, ಎ.10ರಂದು ಶಿಕ್ಷೆ ಪ್ರಕಟ


ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2022ರಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯಕ್ಕೆ ಆತ ಸಲ್ಲಿಸಿದ್ದ ತಪ್ಪೊಪ್ಪಿಗೆ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದ್ದು, ಏಪ್ರಿಲ್ 10ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

2022ರ ನವೆಂಬರ್ 19ರಂದು ಆಟೋರಿಕ್ಷಾದಲ್ಲಿ ಐಇಡಿ ಅಳವಡಿಸಿದ್ದ ಕುಕ್ಕರ್ ಬಾಂಬ್ ತೆಗೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿತ್ತು. ತನಿಖೆಯ ಆರಂಭದಲ್ಲಿ ತಾನು ನಿರಾಪರಾಧಿ ಎಂದು ವಾದಿಸಿದ್ದ ಶಾರೀಕ್, ನಂತರ 2025ರ ಡಿಸೆಂಬರ್‌ನಲ್ಲಿ ತನ್ನ ವಕೀಲರ ಮೂಲಕ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದನು. “ಕುಕ್ಕರ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು ಇಟ್ಟು ಸ್ಫೋಟ ನಡೆಸಿದ್ದು ಸತ್ಯ” ಎಂದು ಆತ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.

ಕುಕ್ಕರ್ ಬಾಂಬ್ ಸ್ಪೋಟದ ತನಿಖೆ ಎನ್‌ಐಎ ತನಿಖೆ ಕೈಗೆತ್ತಿಕೊಂಡಿತ್ತು. 2024ರಲ್ಲಿ ಶಾರೀಕ್ ಮತ್ತು ಸೈಯದ್ ಯಾಸೀನ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ ಆರೋಪಿಯು ತನಿಖಾಧಿಕಾರಿಗಳು ಹೊರಿಸಿರುವ ಎಲ್ಲಾ ಆರೋಪಗಳು ಸತ್ಯವೆಂದು ಒಪ್ಪಿಕೊಂಡಿರುವುದರಿಂದ, ನ್ಯಾಯಾಲಯವು ಮೂರು ತಿಂಗಳ ಸುದೀರ್ಘ ವಿಚಾರಣೆಯ ನಂತರ ಅರ್ಜಿಯನ್ನು ಪುರಸ್ಕರಿಸಿದೆ. ಏಪ್ರಿಲ್ 10ರಂದು ಈತನಿಗೆ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.

Ads on article

Advertise in articles 1

advertising articles 2

Advertise under the article