ಸೊರಕೆಯವರನ್ನು ಕಾಪು ಜನರು ನೆನಪಿನ ಸಮಾಧಿಯಲ್ಲಿ ಹೂತು ಹಾಕಿದ್ದಾರೆ- ಜಿತೇಂದ್ರ ಶೆಟ್ಟಿ ಉದ್ಯಾವರ
ಕಾಪು ಕ್ಷೇತ್ರದಲ್ಲಿ ಕಾಂಗ್ರೆಸ್ನಿOದ ಗೆದ್ದು ಶಾಸಕರಾಗಿದ್ದ ವಿನಯ್ ಕುಮಾರ್ ಸೊರಕೆಯವರು ನಂತರ ರಾಜ್ಯದ ಸಚಿವರಾಗಿದ್ದಾರೆ. ಆದರೆ ಈ ಬಾರಿ ಸಜ್ಜನ ರಾಜಕಾರಣಿ ಸುರೇಶ್ ಶೆಟ್ಟಿ ಗುರ್ಮೆಯವರನ್ನು ಗೆಲ್ಲಿಸಿರುವ ಜನತೆ ವಿನಯ್ ಕುಮಾರ್ ಸೊರಕೆಯವರನ್ನು ನೆನಪಿನ ಸಮಾಧಿಯಲ್ಲಿ ಹೂತು ಹಾಕಿದ್ದಾರೆ ಎಂದು ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಕಿಡಿ ಕಾರಿದ್ದಾರೆ.
ಸೋಲಿನ ಹತಾಶೆಯಲ್ಲಿರುವ ವಿನಯ್ ಕುಮಾರ್ ಸೊರಕೆಯವರು, ಜನ ನನ್ನನ್ನು ಮರೆಯುತ್ತಿದ್ದಾರೆ ಎಂಬ ಕಾರಣಕ್ಕೆ ಹೊಲಸು ರಾಜಕಾರಣ ಮಾಡುತ್ತಿದ್ದಾರೆ. ಶಾಸಕ ಸುರೇಶ್ ಶೆಟ್ಟಿಯವರು ಪಕ್ಷಾತೀತವಾಗಿ ಕ್ಷೇತ್ರದಾದ್ಯಂತ ಕೆಲಸವನ್ನು ಮಾಡುತ್ತಿರುವುದನ್ನು ಸಹಿಸದ ಸೊರಕೆಯವರು, ಶಾಸಕರ ಘನತೆಗೆ ಕಪ್ಪು ಮಸಿ ಬಳಿಯಲು ಪ್ರಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ದೇವಸ್ಥಾನಗಳಿಗೆ ವ್ಯವಸ್ಥಾಪನ ಸಮಿತಿಯ ಸದಸ್ಯರ ಆಯ್ಕೆಯಲ್ಲಿ ಇದುವರೆಗೆ ದೇವಸ್ಥಾನದ ಬಾಗಿಲ ಬಳಿಯೂ ಬಾರದ ವ್ಯಕ್ತಿಗಳನ್ನು ಆಯ್ಕೆ ಮಾಡಿ ಹಿಂದೂ ದೇವಾಲಯಗಳು ಅಭಿವೃದ್ಧಿ ಹೊಂದದOತೆ ಮಾಡುತ್ತಿರುವುದಲ್ಲದೇ, ದೇವಾಲಯಗಳು ತನ್ನ ನಿಯಂತ್ರಣದಲ್ಲಿ ಇರಬೇಕೆಂದು ಪ್ರಯತ್ನಿಸುತ್ತಿರುವುದು ಅಕ್ಷಮ್ಯ ಅಪರಾಧ. ದೇವರಿಗೂ ಅನ್ಯಾಯ ಮಾಡುತ್ತಿರುವುದನ್ನು ಕಾಪುವಿನ ಜನತೆ ಸಹಿಸುವುದಿಲ್ಲ. ತಕ್ಕ ಉತ್ತರವನ್ನು ನೀಡುತ್ತಾರೆ ಎಂದರು. ಭಾಜಪದಿಂದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆಯ ಅಂಗವಾಗಿ ಕಾಪು ಬೀಚ್ನಲ್ಲಿ ನಡೆಸಿದ ಉತ್ಸವಕ್ಕೆ ಸಮಸ್ಯೆಗಳನ್ನು ಉಂಟು ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿದ್ದ ಭಾಜಪದ ಧ್ವಜ ಹಾಗು ಬ್ಯಾನರ್ಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಒತ್ತಡ ಹಾಕಿದ್ದು, ಸೊರಕೆಯವರ ಹತಾಶೆಯ ಮನೋಭಾವವನ್ನು ತಿಳಿಸುತ್ತದೆ.
ಪೆರ್ಡೂರು ದೇವಸ್ಥಾನದ ಜೀರ್ಣೋದ್ಧಾರವನ್ನು ರಾಜಕೀಯ ರಹಿತವಾಗಿ ನಡೆಸಲು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಯೋಜಿಸಿದ್ದರು. ಆದರೆ ಗೊಂದಲಗಳನ್ನು ಸೃಷ್ಟಿಸಿ, ಜೀರ್ಣೋದ್ದಾರ ಕಾರ್ಯವು ಯಶಸ್ವಿಯಾಗಬಾರದೆಂದು ಹುನ್ನಾರ ಮಾಡಿದ್ದೇ ವಿನಯ್ ಕುಮಾರ್ ಸೊರಕೆ. ಇಂದಿಗೂ ರಾಜಕೀಯ ರಹಿತವಾಗಿ ದೇವರ ಕಾರ್ಯಮಾಡಲು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಹವಣಿಸುತ್ತಿರುವುದು ಕ್ಷೇತ್ರದ ಜನತೆಗೆ ತಿಳಿದಿದೆ.
ಬುದ್ದಿವಂತರ ಮೋಸ ಭಯಂಕರವಾಗಿರುತ್ತದೆ. ಸೊರಕೆಯವರು ಬುದ್ದಿವಂತರು, ಹೀಗಾಗಿ ಅವರು ಮಾಡುವ ಮೋಸಗಳು ಹಾಗೇ ಇರುತ್ತದೆ. ತಾನು ಏನು ಆರೋಪ ಹೊರಿಸಿದರು, ಸೌಮ್ಯ ಜೀವಿ, ಸಜ್ಜನ ಶಾಸಕರು ಏನು ಪ್ರತಿಕ್ರಿಯಿಸುವುದಿಲ್ಲ ಎಂಬ ಬಂಡ ಧೈರ್ಯದಿಂದ ಕಳೆದ ಎರಡೂವರೆ ವರ್ಷದಿಂದ ವಿನಾ ಕಾರಣ ಸುಳ್ಳು ಹೇಳಿಕೊಂಡು, ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸವನ್ನು ವಿನಯ್ ಕುಮಾರ್ ಸೊರಕೆಯವರು ಮಾಡಿದ್ದಾರೆ. ಈಗ ಅದಕ್ಕೆಲ್ಲಾ ಉತ್ತರವನ್ನು ಕೊಡುವ ಕಾಲ ಬಂದಿದೆ. ವಿನಯ್ ಕುಮಾರ್ ಸೊರಕೆಯವರು ಕ್ಷೇತ್ರದ ಜನತೆಗೆ ಮಾಡಿದ ಅನ್ಯಾಯಗಳ ಪಟ್ಟಿಯನ್ನು ನೀಡಲು ಭಾಜಪ ಸಿದ್ದವಾಗಿದೆ.
ಅಧಿಕಾರಿ ಹಾಗು ಕಾಂಗ್ರೆಸಿನ ಕಾರ್ಯಕರ್ತರೇ ಹೇಳುವಂತೆ ಸೊರಕೆಯವರದ್ದು ದ್ವಿಮುಖ ವ್ಯಕ್ತಿತ್ವ. ಅವರನ್ನು ನಂಬುವವರು ವಿರಳ. ಹೀಗಾಗಿ ಕ್ಷೇತ್ರದ ಜನತೆಯೂ ಅವರಿಗೆ ಒಂದೇ ಬಾರಿ ಆರ್ಶಿವದಿಸಿ, ಎರಡು ಬಾರಿ ತಿರಸ್ಕರಿಸಿದ್ದಾರೆ. ಮುಂದಿನ ಬಾರಿಗೆ ಟಿಕೆಟ್ ಸಿಗುವುದೇ ಕಷ್ಟ ಎಂಬ ನಡುವೆ ಕಾಪುವಿನಲ್ಲಿ ಕಾಂಗ್ರೆಸ್ ಪಕ್ಷದ ಶವಪೆಟ್ಟಿಗೆ ಕೊನೆಯ ಮೊಳೆಯನ್ನು ಸೊರಕೆಯವರೇ ಹೊಡೆಯುತ್ತಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.