ಸ್ಕೂಟರ್ ಕಳವು ಪ್ರಕರಣ: ಆರೋಪಿಯ ಬಂಧನ
Friday, June 12, 2026
ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸ್ಕೂಟರ್ ಹಾಗೂ ಮೊಬೈಲ್ ಫೋನ್ ಕಳವುಗೈದ ಆರೋಪಿಯನ್ನು ಕೊಲ್ಲೂರಿನಲ್ಲಿ ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಸಂಜೀವ್ ಅಲಿಯಾಸ್ ಸಂಜು ಬಂಧಿತ ಆರೋಪಿ. ಹೋಟೆಲ್ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಆನಂದ ಶೆಟ್ಟಿ ಅವರು ಜೂನ್ 2ರಂದು ಉಡುಪಿಯ ಬಡಾನಿಡಿಯೂರು ಗ್ರಾಮದ AW Complex ಹಿಂಬದಿ ಪಾರ್ಕಿಂಗ್ ಹತ್ತಿರ ತಮ್ಮ ಟಿವಿಎಸ್ ವೇಗೋ ಸ್ಕೂಟರ್ ಅನ್ನು ನಿಲ್ಲಿಸಿದ್ದರು. ಮರು ದಿನ ಸ್ಕೂಟರ್ ಕಳವಾಗಿತ್ತು. ಅಲ್ಲದೇ ಆನಂದ್ ಶೆಟ್ಟಿ ವಾಸವಿದ್ದ ಕೊಠಡಿಯಲ್ಲೇ ವಾಸ್ತವ್ಯವಿದ್ದ ಸಪ್ಲೈಯರ್ ಸಂಜೀವ್ ಎಂಬಾತ ನಾಪತ್ತೆಯಾಗಿದ್ದ. ಆನಂದ್ ಶೆಟ್ಟಿ ಅವರ ಮೊಬೈಲ್ ಫೋನ್, ಹಣ ಕೂಡಾ ಕಳವಾಗಿತ್ತು. ಈ ಬಗ್ಗೆ ಆನಂದ್ ಶೆಟ್ಟಿ ಅವರು ಮಲ್ಪೆ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಮಲ್ಪೆ ಪೊಲೀಸರು ಕೊಲ್ಲೂರು ಬಸ್ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.