-->
ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶ್ವಾಸನಾಳ ಕ್ಯಾನ್ಸರ್‌ಗೆ ಯಶಸ್ವಿ ರೋಬೋಟಿಕ್ ಶಸ್ತ್ರಚಿಕಿತ್ಸೆ

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶ್ವಾಸನಾಳ ಕ್ಯಾನ್ಸರ್‌ಗೆ ಯಶಸ್ವಿ ರೋಬೋಟಿಕ್ ಶಸ್ತ್ರಚಿಕಿತ್ಸೆ


ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರ ತಂಡವು ಅತ್ಯಂತ ಸಂಕೀರ್ಣವಾದ ಶ್ವಾಸನಾಳದ (ಎದೆಯೊಳಗಿನ) ರೋಬೋಟಿಕ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದು, ಕರ್ನಾಟಕದಲ್ಲಿ ಸುಧಾರಿತ ರೋಬೋಟಿಕ್ ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಿಸಿದೆ.


ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 36 ವರ್ಷದ ಪುರುಷ ರೋಗಿಯ ಶ್ವಾಸನಾಳದ ಕೆಳಭಾಗದಲ್ಲಿ ಗೆಡ್ಡೆ ಇರುವುದನ್ನು ಎಂಡೋಸ್ಕೋಪಿ ಪರೀಕ್ಷೆಯಲ್ಲಿ ಪತ್ತೆ ಮಾಡಲಾಗಿತ್ತು. ಈ ಹಿಂದೆ ಹೊರಗಿನ ಆಸ್ಪತ್ರೆಯಲ್ಲಿ ಗೆಡ್ಡೆಯನ್ನು ಭಾಗಶಃ ತೆಗೆದುಹಾಕಲಾಗಿದ್ದರೂ, ಉಳಿದಿದ್ದ ಗೆಡ್ಡೆಯನ್ನು ಸಂಪೂರ್ಣವಾಗಿ ತೆರವುಗೊಳಿಸುವ ಅಗತ್ಯವಿತ್ತು.

ಕಸ್ತೂರ್ಬಾ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾದ ಡಾ. ನವೀನ ಕುಮಾರ್ ಎ.ಎನ್. ಅವರ ನೇತೃತ್ವದಲ್ಲಿ ಈ ಸಂಕೀರ್ಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ರೋಬೋಟಿಕ್ ತಂತ್ರಜ್ಞಾನದ ಸಹಾಯದಿಂದ ಶ್ವಾಸನಾಳದ ಹಾನಿಗೊಳಗಾದ ಭಾಗವನ್ನು ಸಂಪೂರ್ಣವಾಗಿ ತೆಗೆದುಹಾಕಿ, ಆರೋಗ್ಯಕರ ಭಾಗಗಳನ್ನು ಜೋಡಿಸುವ ಮೂಲಕ ಶ್ವಾಸನಾಳವನ್ನು ಮರುನಿರ್ಮಿಸಲಾಯಿತು.

ಶಸ್ತ್ರಚಿಕಿತ್ಸೆಯ ವೇಳೆ ರೋಗಿಯ ಉಸಿರಾಟ ಹಾಗೂ ಆಮ್ಲಜನಕದ ಮಟ್ಟವನ್ನು ನಿರಂತರವಾಗಿ ಕಾಪಾಡಿಕೊಳ್ಳಬೇಕಾಗಿದ್ದರಿಂದ ಈ ಪ್ರಕ್ರಿಯೆ ಅತ್ಯಂತ ಸವಾಲಿನದ್ದಾಗಿತ್ತು. ಸಾಂಪ್ರದಾಯಿಕ ತೆರೆದ ಶಸ್ತ್ರಚಿಕಿತ್ಸೆಯೊಂದಿಗೆ ಹೋಲಿಸಿದರೆ, ರೋಬೋಟಿಕ್ ವಿಧಾನವು ಕಡಿಮೆ ನೋವು, ಕಡಿಮೆ ರಕ್ತಸ್ರಾವ ಮತ್ತು ವೇಗವಾದ ಚೇತರಿಕೆಯನ್ನು ಒದಗಿಸಿದೆ. ಇದರ ಫಲವಾಗಿ ರೋಗಿಯನ್ನು ಶಸ್ತ್ರಚಿಕಿತ್ಸೆಯ ನಾಲ್ಕನೇ ದಿನವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಶಸ್ತ್ರಚಿಕಿತ್ಸಾ ತಂಡದಲ್ಲಿ ಡಾ. ನವಾಜ್ ಉಸ್ಮಾನ್, ಡಾ. ಅಖಿಲ್ ಪಲೋದ್, ಡಾ. ಅನಂತ್ ಬಾಲಕೃಷ್ಣನ್ ಹಾಗೂ ಡಾ. ಪ್ರೀತಿ ಸಹಕರಿಸಿದ್ದು, ಅರಿವಳಿಕೆ ವಿಭಾಗದ ಡಾ. ಅನಿತಾ ಎನ್. ಮತ್ತು ಡಾ. ಶ್ರೇಯಾ ಪ್ರಮುಖ ಪಾತ್ರ ವಹಿಸಿದರು.

ಈ ಸಾಧನೆ ಕುರಿತು ಮಾತನಾಡಿದ ಡಾ. ನವೀನ ಕುಮಾರ್ ಎ.ಎನ್., “ರೋಬೋಟಿಕ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳಲ್ಲಿ ಇದು ತಾಂತ್ರಿಕವಾಗಿ ಅತ್ಯಂತ ಸವಾಲಿನ ಕಾರ್ಯವಿಧಾನಗಳಲ್ಲಿ ಒಂದಾಗಿದೆ. ಶಸ್ತ್ರಚಿಕಿತ್ಸಾ ಮತ್ತು ಅರಿವಳಿಕೆ ತಂಡಗಳ ನಡುವಿನ ನಿಖರ ಸಮನ್ವಯದಿಂದ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಇದರಿಂದ ರೋಗಿಗೆ ದೊಡ್ಡ ಛೇದನ ಮತ್ತು ದೀರ್ಘಕಾಲದ ಚೇತರಿಕೆಯ ಅಗತ್ಯ ತಪ್ಪಿದೆ,” ಎಂದು ಹೇಳಿದರು.

ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ್ ಕಂಟಿಪುಡಿ ಅವರು ತಂಡವನ್ನು ಅಭಿನಂದಿಸಿ, “ಈ ಸಾಧನೆ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು, ನರ್ಸಿಂಗ್ ಸಿಬ್ಬಂದಿ ಹಾಗೂ ತಂತ್ರಜ್ಞರ ಪರಿಣತಿ ಮತ್ತು ಸಮರ್ಪಣೆಯ ಪ್ರತೀಕವಾಗಿದೆ. ಭವಿಷ್ಯದಲ್ಲಿಯೂ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈದ್ಯಕೀಯ ಪರಿಣತಿಯಲ್ಲಿ ಹೂಡಿಕೆ ಮುಂದುವರಿಸಿ, ಸಂಕೀರ್ಣ ರೋಬೋಟಿಕ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳ ಪ್ರಮುಖ ಕೇಂದ್ರವಾಗಿ ಬೆಳೆಯುವ ಗುರಿ ಹೊಂದಿದ್ದೇವೆ,” ಎಂದು ತಿಳಿಸಿದರು.

ಕಸ್ತೂರ್ಬಾ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ವಿಭಾಗವು ಪ್ರಸ್ತುತ ಶ್ವಾಸಕೋಶ, ಅನ್ನನಾಳ, ಹೊಟ್ಟೆ, ಗುದನಾಳ, ಮೇದೋಜ್ಜೀರಕ ಗ್ರಂಥಿ, ಯಕೃತ್ತು, ಗರ್ಭಕೋಶ ಹಾಗೂ ಮೂತ್ರಪಿಂಡ ಸೇರಿದಂತೆ ವಿವಿಧ ಅಂಗಾಂಗಗಳ ಕ್ಯಾನ್ಸರ್‌ಗಳಿಗೆ ಸುಧಾರಿತ ರೋಬೋಟಿಕ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ.


ಈ ಸಾಧನೆಯೊಂದಿಗೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಈ ಭಾಗದ ರೋಗಿಗಳಿಗೆ ವಿಶ್ವಮಟ್ಟದ ಮತ್ತು ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸಾ ಸೇವೆಗಳನ್ನು ಒದಗಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Ads on article

Advertise in articles 1

advertising articles 2

Advertise under the article