ಶೀರೂರು ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ 8ನೇ ವರ್ಷದ ಆರಾಧನಾ ಮಹೋತ್ಸವ
ಶೀರೂರು ಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ 8ನೇ ವರ್ಷದ ಆರಾಧನಾ ಮಹೋತ್ಸವವು ಉಡುಪಿ ಶ್ರೀರಾಘವೇಂದ್ರ ಮಠದ ಸನ್ನಿಧಾನದಲ್ಲಿ ನೆರವೇರಿತು. ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಕುಟುಂಬಸ್ಥರು ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಈ ಆರಾಧನಾ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಪ್ರಾತಃಕಾಲದಲ್ಲಿ ಶ್ರೀರಾಘವೇಂದ್ರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪವಮಾನ ಕಲಶಾಭಿಷೇಕ ಹೋಮ ಹಾಗೂ ವಿರಜಾ ಹೋಮಗಳು ಜರುಗಿದವು. ವೇದಮೂರ್ತಿ ನಟರಾಜ ಉಪಾಧ್ಯಾಯ ಹಾಗೂ ವೇದಮೂರ್ತಿ ಅನಿಲ್ ಅವರು ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ನಂತರ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಮೃತ್ತಿಕಾ ವೃಂದಾವನಕ್ಕೆ ಪಂಚಾಮೃತಾಭಿಷೇಕ ಹಾಗೂ ವಿಶೇಷ ಪೂಜೆ ನಡೆಯಿತು. ಈ ಪೂಜೆಯನ್ನು ಶ್ರೀಪಾದರ ಪೂರ್ವಾಶ್ರಮದ ಸಹೋದರ ಪಿ. ಲಾತವ್ಯ ಆಚಾರ್ಯ ಅವರು ನೆರವೇರಿಸಿದರು. ಅಪರಾಹ್ನ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯೂ ಮಾಡಲಾಗಿತ್ತು.
ಆರಾಧನಾ ಮಹೋತ್ಸವದಲ್ಲಿ ಶ್ರೀರಾಯರ ಮಠದ ಜಯತೀರ್ಥ ಆಚಾರ್ಯ, ಅಪ್ಪಣ್ಣ ಆಚಾರ್ಯ, ಹರಿಕೃಷ್ಣ ಪುನರೂರು, ಲಕ್ಷ್ಮೀನಾರಾಯಣ ತಂತ್ರಿ, ಸೊಂಡೂರು ಪ್ರಹ್ಲಾದ ಆಚಾರ್ಯ, ಪಿ. ವಾದಿರಾಜ ಆಚಾರ್ಯ, ಪಿ. ಶ್ರೀನಿವಾಸ ಆಚಾರ್ಯ, ಪಿ. ವೃಜನಾಥ ಆಚಾರ್ಯ, ಗೋಪಾಲಕೃಷ್ಣ ಭಟ್ (ಒಳಕಾಡು), ಡಾ. ವ್ಯಾಸರಾಜ ತಂತ್ರಿ, ಚೆನ್ನೈನ ರಾಜಗೋಪಾಲ್, ಶ್ರೀ ರಾಜೇಂದ್ರ ಆಚಾರ್ಯ (ಬಡಗುಬೆಟ್ಟು), ಶ್ರೀಪಾದರ ಪೂರ್ವಾಶ್ರಮದ ಸಹೋದರರಾದ ಅಕ್ಷೋಭ್ಯ ಆಚಾರ್ಯ,ಅರ್ಜುನ ಆಚಾರ್ಯ, ವಿಶಾಲ ಆಚಾರ್ಯ, ಶಂಕರನಾರಾಯಣ ಹೊಳ್ಳ (ಕುಂದಾಪುರ), ಇಮೇಜ್ ಮೊಬೈಲ್ ಸಂಸ್ಥೆಯ ಯಾದವ್, ರಾಕೇಶ್ ಭಾಗವಹಿಸಿ ಶ್ರೀಪಾದರಿಗೆ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕೇಮಾರು ಶ್ರೀಸಾಂದೀಪನಿ ಮಠದ ಆಶ್ರಮದಲ್ಲಿಯೂ ಶ್ರೀ ಈಶವಿಠಲದಾಸ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಆರಾಧನಾ ನಿಮಿತ್ತ ವಿಶೇಷ ಪೂಜೆ, ಪುಷ್ಪಾರ್ಚನೆ ಹಾಗೂ ಪ್ರಾರ್ಥನೆಗಳು ನೆರವೇರಿದವು.