ಷೇರು ಮಾರುಕಟ್ಟೆಯಲ್ಲಿ ಲಾಭದ ಆಮಿಷ ಒಡ್ಡಿ ವಂಚನೆ: ಮುಂಬೈಯಲ್ಲಿ ಉಡುಪಿ ಮೂಲದ ಮಹಿಳೆ ಸೆರೆ
Friday, July 10, 2026
ಷೇರು ಮಾರುಕಟ್ಟೆ ಹೂಡಿಕೆಯಿಂದ ಭಾರೀ ಲಾಭದ ಭರವಸೆ ನೀಡಿ ಜನರಿಗೆ ವಂಚಿಸಿದ ಆರೋಪದ ಮೇಲೆ ಉಡುಪಿ ಕೊಳಲಗಿರಿಯ ಕುಕ್ಕಿಕಟ್ಟೆಯ ದೀಪಿಕಾ ಮನೋಜ್ ಶೆಟ್ಟಿ ಎಂಬ ಮಹಿಳೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಿರುದ್ಧ ಚೆಕ್ ಬೌನ್ಸ್ ಮತ್ತು ಆರ್ಥಿಕ ವಂಚನೆಗೆ ಸಂಬಂಧಿಸಿದ ಆರೋಪಗಳೂ ಇವೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದೂರಿನ ಪ್ರಕಾರ, ಆರೋಪಿಯು ಹೂಡಿಕೆಯ ಮೇಲೆ 10% ರಿಟರ್ನ್ ನೀಡುವುದಾಗಿ ಭರವಸೆ ನೀಡಿ ಒಬ್ಬ ಮಹಿಳೆ ಮತ್ತು ಆಕೆಯ ಸಹೋದರನನ್ನು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ಮನವೊಲಿಸಿದ್ದಾಳೆ. ಈ ಭರವಸೆಗಳನ್ನು ನಂಬಿ ಸಂತ್ರಸ್ತರು ಒಟ್ಟು 10 ಲಕ್ಷ ರೂ. ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆ ಮುಂಬಯಿಯ ಕಾಂದಿವಲಿ ಪಶ್ಚಿಮದಲ್ಲಿ ನಡೆದಿದೆ. ಸುಮಾರು 60 ವರ್ಷ ವಯಸ್ಸಿನ ರಜನಿ ದಯಾನಂದ ಶೆಟ್ಟಿ ಅವರು ನೀಡಿದ ದೂರಿನ ಆಧಾರದ ಮೇಲೆ ಕಾಂದಿವಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.