ತೆಂಕಪೇಟೆ: ರಸ್ತೆಹೊಂಡ ಮುಚ್ಚಲು ಟ್ರಾಫಿಕ್ ಪೊಲೀಸರ ಶ್ರಮದಾನ
Saturday, July 11, 2026
ಮಳೆಯಿಂದಾಗಿ ಉಡುಪಿ ತೆಂಕಪೇಟೆಯ ರಸ್ತೆಯಲ್ಲಿ ಉಂಟಾಗಿದ್ದ ಭಾರಿ ಗಾತ್ರದ ಹೊಂಡಗಳನ್ನು ಉಡುಪಿಯ ಟ್ರಾಫಿಕ್ ಪೋಲಿಸರು ತಾತ್ಕಾಲಿಕವಾಗಿ ಮುಚ್ಚಿ ವಾಹನ ಸವಾರರು ಪರದಾಡುವುದಕ್ಕೆ ಮುಕ್ತಿ ನೀಡಿದ್ದಾರೆ.
ನಿನ್ನೆಯಷ್ಟೇ ದ್ವಿಚಕ್ರ ಸವಾರರೋರ್ವರು ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದನ್ನು ಗಮನಿಸಿದ ಉಡುಪಿ ಟ್ರಾಫಿಕ್ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಹುಸೇನ್ ಸಾಬ್ ಹಾಗೂ ಸಿಬ್ಬಂದಿಗಳು ಇಂದು ಸಂಜೆ ಕಲ್ಲು, ಜಲ್ಲಿಹುಡಿ ಇತ್ಯಾದಿ ಗೂಡ್ಸ್ ವಾಹನದಲ್ಲಿ ತಂದು ಹಾರೆ - ಪಿಕ್ಕಾಸಿ ಹಿಡಿದು ಹೊಂಡ ಮುಚ್ಚಿದ್ದಾರೆ.
ಈ ಬಗ್ಗೆ ಕಳೆದ ವಾರವಷ್ಟೇ ಸ್ಟಾರ್ ಸಮಯ ನ್ಯೂಸ್ ಪೋರ್ಟಲ್ ಸಚಿತ್ರ ವರದಿ ಮಾಡಿದ್ದು, ತೆಂಕಪೇಟೆಯ ಕ್ರೀಮ್ ಬೌಲ್ ಪರಿಸರದಲ್ಲಿ ರಸ್ತೆ ಹೊಂಡ-ಗುಂಡಿ ಬಿದ್ದಿರುವ ಬಗ್ಗೆ ಉಡುಪಿಯ ಗಮನ ಸೆಳೆದಿತ್ತು. ಆದರೂ ಉಡುಪಿ ನಗರಸಭೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಇನ್ನಷ್ಟು ಅಪಘಾತಗಳನ್ನು ತಪ್ಪಿಸಲು ಟ್ರಾಫಿಕ್ ಪೊಲೀಸರು ಸ್ವ-ಪ್ರೇರಣೆಯಿಂದ ಈ ಕ್ರಮ ಕೈಗೊಂಡಿದ್ದಾರೆ. ಪೊಲೀಸರ ಈ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.