ಉಡುಪಿ ಪತ್ರಿಕಾ ಭವನ ಸಮಿತಿಯ ಲೆಕ್ಕಾಚಾರ ಮಂಡನೆ: ನೂತನ ಸಮಿತಿಗೆ ಅಧಿಕಾರ ಹಸ್ತಾಂತರ
ಉಡುಪಿ ಪತ್ರಿಕಾ ಭವನ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮವು ಸಮಿತಿಯ ನಿಕಟಪೂರ್ವ ಸಂಚಾಲಕ ಅಜಿತ್ ಆರಾಡಿ ಅಧ್ಯಕ್ಷತೆಯಲ್ಲಿ ಸೋಮವಾರ ಉಡುಪಿಯ ಪತ್ರಿಕಾ ಭವನದಲ್ಲಿ ನಡೆಯಿತು.
ನಿಕಟಪೂರ್ವ ಸಂಚಾಲಕ ಅಜಿತ್ ಆರಾಡಿ ವರದಿ ವಾಚಿಸಿ, 2024-2025 ಹಾಗೂ 2025-2026 ನೇ ಸಾಲಿನ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟರು.
ಲೆಕ್ಕಪರಿಶೋಧಕರಿಂದ ಪರಿಶೋಧನೆಗೆ ಒಳಪಟ್ಟಿರುವ ವರದಿಯನ್ನು ಸದಸ್ಯರು ಚಪ್ಪಾಳೆ ತಟ್ಟುವ ಮೂಲಕ ಅಂಗೀಕರಿಸಿದರು. ಲೆಕ್ಕಪತ್ರವನ್ನು ಅಂಗೀಕರಿಸಲಾಯಿತು.
ಉಡುಪಿ ಪತ್ರಿಕಾ ಭವನದಲ್ಲಿ 2022 ರ ಅಕ್ಟೋಬರ್ 19 ರಂದು ಉಡುಪಿ ಜಿಲ್ಲಾ ಸಂಘದ ನೇತೃತ್ವದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದ ಉಡುಪಿ ಪತ್ರಿಕಾ ಭವನ ಸಮಿತಿಯು 2022 ರ ನವೆಂಬರ್ 1 ರಿಂದ ಭವನದ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಸಮಿತಿಯು ತನ್ನ 3 ವರ್ಷದ ಅವಧಿಯಲ್ಲಿ ಭವನದಲ್ಲಿ ಹಾಗೂ ಪತ್ರಕರ್ತರ ಅನುಕೂಲಕ್ಕೆ ಮಾಡಿರುವ ಹೊಸ ಯೋಜನೆ, ಅಭಿವೃದ್ಧಿ ಕಾರ್ಯ, ಆರೋಗ್ಯ ನಿಧಿಯ ಬಗ್ಗೆ ವರದಿ ಮಂಡಿಸಲಾಯಿತು. ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಿರುವ ಆದಾಯದ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಈ ಹಣವನ್ನು ಉಡುಪಿ ನಗರದಲ್ಲಿ ಕಾರ್ಯನಿರ್ವಹಿಸುವ ನಗರದ ಪತ್ರಕರ್ತರಿಗೆ ಮಾತ್ರವೇ ವಿನಿಯೋಗಿಸುವ ಬಗ್ಗೆ ನಿರ್ಣಯ ಮಾಡಲಾಯಿತು.
ಪತ್ರಿಕಾ ಭವನದ ಲೆಕ್ಕಾಚಾರವನ್ನು ಯಥಾವತ್ತಾಗಿ ಅತ್ಯಂತ ಪಾರದರ್ಶಕವಾಗಿ ಮಂಡಿಸಿದ ನಿಕಟಪೂರ್ವ ಸಂಚಾಲಕ ಅಜಿತ್ ಆರಾಡಿ ಅವರನ್ನು ಉಡುಪಿ ಜಿಲ್ಲಾ ಸಂಘ ಹಾಗೂ ಭವನದಿಂದ ಸನ್ಮಾನಿಸಲಾಯಿತು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುಜಿ ಕುರ್ಯ, ಸಂಘದ ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್, ಪತ್ರಿಕಾ ಭವನ ಸಮಿತಿ ಸಂಚಾಲಕ ಅಂಕಿತ್ ಶೆಟ್ಟಿ ಮಾತನಾಡಿದರು.
ಹಿರಿಯ ಪತ್ರಕರ್ತರಾದ ರಾಜು ಖಾರ್ವಿ, ಉಮೇಶ್ ಮಾರ್ಪಳ್ಳಿ, ಗೋಪಾಲಕೃಷ್ಣ ಪಾದೂರು ಅವರು ಉಡುಪಿ ಪತ್ರಿಕಾ ಭವನ ಸಮಿತಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಮೆಚ್ಚುಗೆ ಮಾತುಗಳನ್ನಾಡಿದರು.
ಸಹ ಸಂಚಾಲಕ ಗಣೇಶ್ ಕಲ್ಯಾಣಪುರ ವಂದಿಸಿದರು. ಹಿರಿಯ ಪತ್ರಕರ್ತ ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

