ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ ಷರತ್ತುಬದ್ಧ ಜಾಮೀನು
ಗ್ರಾಹಕ ಆಯೋಗದ ಆದೇಶವನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಅಮೃತ್ ಶೆಣೈಗೆ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಬಂಧಿತರ ಆರೋಗ್ಯದ ಹಿನ್ನೆಲೆಯಲ್ಲಿ ಹಾಗೂ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ ಹೊರಡಿಸುವಾಗ ಕೆಲವೊಂದು ಅಗತ್ಯ ಕ್ರಮಳನ್ನು ಕೈಗೊಳ್ಳದೇ ಇರುವುದನ್ನು ಪ್ರಶ್ನಿಸಿ ಜಾಮೀನು ನೀಡುವಂತೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ರಾಜ್ಯ ಗ್ರಾಹಕ ಆಯೋಗವು, ಒಂದು ಲಕ್ಷ ರೂ. ಠೇವಣಿ ಹಾಗೂ ಶ್ಯೂರಿಟಿ ಒದಗಿಸುವ ಷರತ್ತಿನ ಮೇರೆಗೆ ಜಾಮೀನು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ರಾಜ್ಯ ಗ್ರಾಹಕ ಆಯೋಗವು ನೀಡಿದ ತಡೆಯಾಜ್ಞೆಯನ್ನೂ ಮೀರಿ ಜಿಲ್ಲಾ ಗ್ರಾಹಕ ಆಯೋಗವು ಜೈಲುವಾಸ ವಿಧಿಸಿರುವುದನ್ನೂ ಇಲ್ಲಿ ಪ್ರಶ್ನಿಸಲಾಗಿದೆ,
ಉಡುಪಿಯ ವಾಯೇಜರ್ ಅಪಾರ್ಟ್ಮೆಂಟ್ಟ್ನಲ್ಲಿ ಫ್ಲ್ಯಾಟ್ ಅನ್ನು ಸಂತೋಷ್ ಪೈ ಅವರಿಗೆ ನೋಂದಣಿ ಮಾಡಿಕೊಡಲು ಅಮೃತ್ ಶೆಣೈ ವಿಫಲರಾಗಿದ್ದರು. ಇದರಿಂದ ಅಸಮಾಧಾನಗೊಂಡ ಸಂತೋಷ್ ಪೈ ಅವರು ಜಿಲ್ಲಾ ಗ್ರಾಹಕ ಆಯೋಗದಲ್ಲಿ ದಾವೆ ಹೂಡಿದ್ದರು.
ವಿಚಾರಣೆ ನಡೆಸಿದ ಗ್ರಾಹಕ ಆಯೋಗವು ಫ್ಲ್ಯಾಟ್ ಅನ್ನು ಸಂತೋಷ್ ಪೈ ಹೆಸರಿಗೆ ನೋಂದಣಿ ಮಾಡಿಕೊಡುವಂತೆ ಅಥವಾ ಅದರ ಬದಲು 27.20 ಲಕ್ಷ ರೂ. ಮೊತ್ತವನ್ನು ಶೇಕಡಾ 9 ರಷ್ಟು ಬಡ್ಡಿಯೊಂದಿಗೆ ಮರುಪಾವತಿಸುವಂತೆ ಆದೇಶ ನೀಡಿತ್ತು. ಆದರೆ ಈ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ, ಗ್ರಾಹಕ ಸಂರಕ್ಷಣಾ ಕಾಯ್ದೆ–2019ರ ಸೆಕ್ಷನ್ 72ರ ಅಡಿಯಲ್ಲಿ ಅಮೃತ್ ಶೆಣೈ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಬಂಧಿಸಲಾಗಿತ್ತು.
ಅವರನ್ನು ನಂತರ ಹಿರಿಯಡ್ಕ ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಲ್ಲಿ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಅವರನ್ನು ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.