ಬಡಬಾಳು ಬಸ್ ನಿಲ್ದಾಣದಲ್ಲಿ ಸೌದೆ ದಾಸ್ತಾನು: ಸಾರ್ವಜನಿಕ ಸೌಲಭ್ಯ ದುರುಪಯೋಗ
Friday, July 03, 2026
ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಬಡಬಾಳು ರಾಜ್ಯ ಹೆದ್ದಾರಿ ಪಕ್ಕದಲ್ಲಿ ಸರ್ಕಾರಿ ಅನುದಾನದಲ್ಲಿ ನಿರ್ಮಿಸಲಾದ ಬಸ್ ತಂಗುದಾಣವನ್ನು ಖಾಸಗಿ ವ್ಯಕ್ತಿಯೊಬ್ಬರು ಸೌದೆ ಸಂಗ್ರಹಿಸುವ ಕೊಟ್ಟಿಗೆಯಾಗಿ ಬಳಸುತ್ತಿರುವುದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಲಾದ ಈ ಬಸ್ ತಂಗುದಾಣವು ಇದೀಗ ತನ್ನ ಮೂಲ ಉದ್ದೇಶ ಕಳೆದುಕೊಂಡಿದೆ. ತಂಗುದಾಣದ ಒಳಗೆ ಸೌದೆ ರಾಶಿ ಹಾಕಿರುವುದರಿಂದ ಬಸ್ ಕಾಯಲು ಸ್ಥಳವೇ ಇಲ್ಲದಂತಾಗಿದೆ.
ಮಳೆ ಹಾಗೂ ಬಿಸಿಲಿನಿಂದ ಆಶ್ರಯ ಪಡೆಯಬೇಕಾದ ಸ್ಥಳವೇ ಈಗ ಅಸೌಕರ್ಯದ ಕೇಂದ್ರವಾಗಿರುವುದಾಗಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಬಸ್ ನಿರೀಕ್ಷಿಸುವಾಗ ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಸರ್ಕಾರಿ ಆಸ್ತಿಯನ್ನು ಈ ರೀತಿಯಾಗಿ ಖಾಸಗಿ ಬಳಕೆಗೆ ಪರಿವರ್ತಿಸಿರುವುದು ಗಂಭೀರ ವಿಚಾರವಾಗಿದ್ದು, ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಅತಿಕ್ರಮಣ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
