ಉಡುಪಿ: ಕಚೇರಿಗೆ ಆಗಮಿಸಿದ ಶಾಸಕ ಯಶ್ಪಾಲ್ ಗೆ ಕಾರ್ಯಕರ್ತರಿಂದ ಅದ್ದೂರಿಗೆ ಸ್ವಾಗತ
Wednesday, July 29, 2026
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಬುಧವಾರ ಅವರು ಶಾಸಕರ ಕಚೇರಿಗೆ ಆಗಮಿಸಿದ ವೇಳೆ ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.
ಶಾಸಕರಿಗೆ ಹಾರಾರ್ಪಣೆ ಮಾಡಿ, ಪುಷ್ಪವೃಷ್ಟಿ ಗೈದ ಕಾರ್ಯಕರ್ತರು "ರಾಷ್ಟ್ರೀಯವಾದಿ ಶಾಸಕರಿಗೆ ಜೈ" ಎಂದು ಘೋಷಣೆಗಳನ್ನು ಕೂಗಿ ಬೆಂಬಲ ವ್ಯಕ್ತಪಡಿಸಿದರು.
ಇತ್ತೀಚೆಗೆ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ದ ಶಾಸಕ ಯಶ್ಪಾಲ್ ಸುವರ್ಣ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು "ಡ್ರಗ್ ಅಡಿಕ್ಟ್" ಎಂದು ಹೇಳಿಕೆ ನೀಡಿದ್ದಲ್ಲದೆ, ಬಾಬರಿ ಮಸೀದಿ ಉಲ್ಲೇಖಿಸಿ ಭಾಷಣ ಮಾಡಿದ್ದರು. ಈ ಹೇಳಿಕೆಗಳು ದ್ವೇಷ ಭಾಷಣವಾಗಿದ್ದು, ಅವಹೇಳನಕಾರಿ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ನಗರ ಪೊಲೀಸ್ ಠಾಣೆಗೆ ದೂರು ನೀಡಿತ್ತು.
ಕಾಂಗ್ರೆಸ್ ದೂರಿನ ಆಧಾರದ ಮೇಲೆ ನಗರ ಠಾಣೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಶಾಸಕರಿಗೆ ಭರ್ಜರಿ ಸ್ವಾಗತ ಕೋರಿದ್ದು, ಅವರ ಪರವಾಗಿ ಘೋಷಣೆಗಳನ್ನು ಕೂಗಿ ಬೆಂಬಲ ಸೂಚಿಸಿದರು.

