ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ ಸಾಧಕರಿಗೆ ಸನ್ಮಾನ
Wednesday, July 01, 2026
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ರಾಷ್ಟ್ರೀಯ ವೈದ್ಯರ ದಿನ, ರಾಷ್ಟ್ರೀಯ ಲೆಕ್ಕ ಪರಿಶೋಧಕರ ದಿನ, ಪತ್ರಿಕಾ ದಿನಾಚರಣೆ ಹಾಗೂ ರಾಷ್ಟ್ರೀಯ ಅಂಚೆ ಕಾರ್ಮಿಕರ ದಿನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಬುಧವಾರ ಸನ್ಮಾನಿಸಲಾಯಿತು.
ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಎಚ್. ಅಶೋಕ್, ಹಿರಿಯ ಲೆಕ್ಕ ಪರಿಶೋಧಕರಾದ ಯು.ಬಿ. ಅಜಿತ್ ಕುಮಾರ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಹಾಗೂ ಅಂಚೆಪೇದೆಯಾದ ನಾಗರಾಜ್ ಶೆಟ್ಟಿಗಾರ್ ಅವರು ಸಮಾಜಕ್ಕೆ ನೀಡಿರುವ ಸೇವೆಯನ್ನು ಸ್ಮರಿಸಿ ಶಾಲು ಹೊದಿಸಿ, ಹೂಮಾಲೆ ಹಾಕಿ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅವರು, ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಪಕ್ಷಾತೀತವಾಗಿ ಹಾಗೂ ಯಾವುದೇ ದ್ವೇಷದ ಮನೋಭಾವವಿಲ್ಲದೆ ಕಾರ್ಯನಿರ್ವಹಿಸಿರುವ ತೃಪ್ತಿ ಇದೆ ಎಂದು ಹೇಳಿದರು. ಪತ್ರಕರ್ತರು ತಮ್ಮ ವರದಿಗಾರಿಕೆಯ ಜವಾಬ್ದಾರಿಯೊಂದಿಗೆ ಸಾಮಾಜಿಕ ಕಳಕಳಿಯನ್ನೂ ಮೈಗೂಡಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಭರಾಟೆಯ ನಡುವೆಯೂ ದಾಖಲೆಯುಕ್ತ ಹಾಗೂ ಪ್ರಬುದ್ಧ ವರದಿಗಾರಿಕೆಯ ಮೂಲಕ ಪತ್ರಿಕೋದ್ಯಮ ತನ್ನ ಮಹತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಪತ್ರಿಕಾ ದಿನಾಚರಣೆಯ ಅಂಗವಾಗಿ ತಮ್ಮನ್ನು ಗೌರವಿಸಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹಾಗೂ ಸಮಿತಿಯ ಪದಾಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳಾದ ಚಂದ್ರಮೋಹನ್ ಚಿಟ್ಪಾಡಿ, ಸತೀಶ್ ಪುತ್ರನ್, ಗಣೇಶ್ ನೆರ್ಗಿ, ಸತೀಶ್ ಕೊಡವೂರು, ಯುವರಾಜ್ ಪುತ್ತೂರು, ಸಂಧ್ಯಾ ತಿಲಕ್ರಾಜ್, ಮಮತಾ ಶೆಟ್ಟಿ, ಭರತ್ ಕುಮಾರ್, ಸಂಜಯ್ ಆಚಾರ್ಯ, ಲಕ್ಷ್ಮೀಶ್ ಶೆಟ್ಟಿ, ಲ್ಯಾನ್ಸಿ ಡಿ'ಸೋಜಾ, ಯಾದವ್ ಆಚಾರ್ಯ, ಅರ್ಚನಾ ದೇವಾಡಿಗ ಹಾಗೂ ಉದ್ಯಮಿ ಸಚಿನ್ ಉಪಸ್ಥಿತರಿದ್ದರು.
.jpeg)

.jpeg)