ಮಹಿಳೆಗೆ ಬೆದರಿಕೆ ಕರೆ ಆರೋಪ: ಸೂಕ್ತ ಕಾನೂನು ಕ್ರಮಕ್ಕೆ ಕರವೇ ಆಗ್ರಹ
ಅಪಘಾತಕ್ಕೀಡಾದ ವ್ಯಕ್ತಿಯೊಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ನಡೆದ ಅನ್ಯಾಯ ಮತ್ತು ನಿರ್ಲಕ್ಷ್ಯದ ವಿರುದ್ಧ ಧ್ವನಿ ಎತ್ತಿದ ಮಹಿಳೆಯೊಬ್ಬರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು, ಈ ಬಗ್ಗೆ ನ್ಯಾಯ ಒದಗಿಸಿಕೊಡುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಉಡುಪಿ ಜಿಲ್ಲಾ ಘಟಕ ಆಗ್ರಹಿಸಿದೆ.
ಉಡುಪಿಯ ಅಕ್ಷಿತಾ ಪೂಜಾರಿ ಅವರು ಸಮಾಜಮುಖಿ ಕಳಕಳಿಯಿಂದ ಅನ್ಯಾಯವನ್ನು ಪ್ರಶ್ನಿಸಿದ ಬಳಿಕ ಬೆದರಿಕೆ ಕರೆಗಳನ್ನು ಎದುರಿಸಿದ್ದು, ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಮೊರೆ ಹೋಗಿದ್ದರು.
ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷ ಅ. ರಾ. ಪ್ರಭಾಕರ್ ಪೂಜಾರಿ ಅವರು ಉಡುಪಿ ನಗರ ಠಾಣೆಗೆ ತೆರಳಿ ಮಹಿಳೆಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು. ಬೆದರಿಕೆ ಕರೆಗಳಿಗೆ ಸಂಬಂಧಿಸಿದಂತೆ ದೂರು ನೀಡಲು ಅಕ್ಷಿತಾ ಪೂಜಾರಿ ಅವರು ಎರಡು ಬಾರಿ ಉಡುಪಿ ನಗರ ಪೊಲೀಸ್ ಠಾಣೆಗೆ ತೆರಳಿದ್ದರೂ, ಪೊಲೀಸರು ತಕ್ಷಣ ಸ್ಪಂದಿಸದೆ ಸಂಜೆ 6.30ರವರೆಗೆ ಠಾಣೆಯಲ್ಲಿ ಕಾಯುವಂತೆ ಮಾಡಿದ್ದಾರೆ ಎಂದು ಕರವೇ ಆರೋಪಿಸಿದೆ.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಅ. ರಾ. ಪ್ರಭಾಕರ್ ಪೂಜಾರಿ, ಸಾಮಾಜಿಕ ಜಾಲತಾಣ ಸಂಚಾಲಕ ಪುರುಷೋತ್ತಮ್ ಪೂಜಾರಿ, ಜಿಲ್ಲಾ ಮುಖಂಡ ಕುಶಾಲ್ ಅಮೀನ್, ಕುಂದಾಪುರ ತಾಲೂಕು ಅಧ್ಯಕ್ಷ ಶಿವ ಆರ್. ಪೂಜಾರಿ, ಕಾಪು ತಾಲೂಕು ಅಧ್ಯಕ್ಷ ಸಿರಾಜುದ್ದೀನ್, ಕಾರ್ಮಿಕ ಘಟಕದ ಉಪಾಧ್ಯಕ್ಷ ಗೋಪಾಲ ದೊರೆ, ಅಯ್ಯಪ್ಪ, ಕುಂದಾಪುರ ಸಾಮಾಜಿಕ ಜಾಲತಾಣ ಸಂಚಾಲಕ ಸಚಿನ್ ಖಾರ್ವಿ, ಗುರುಪ್ರಸಾದ್ ಖಾರ್ವಿ, ಮಹಿಳಾ ಜಿಲ್ಲಾಧ್ಯಕ್ಷೆ ಅಶ್ವಿನಿ ನಾಯ್ಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನುಷಾ, ಜಿಲ್ಲಾ ಪ್ರಧಾನ ಸಂಚಾಲಕಿ ಜಯಶ್ರೀ, ಜಿಲ್ಲಾ ಸಲಹೆಗಾರ್ತಿ ಸುನಂದಾ ಟಿ. ಕೋಟ್ಯಾನ್, ಅಕ್ಷಿತಾ ಪೂಜಾರಿ, ಧನುಷ್, ಪವಿತ್ರ ಶೆಟ್ಟಿ, ವಿಜಯಲಕ್ಷ್ಮಿ, ಅನುಸೂಯ ನಾಯಕ್, ಉಷಾ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಘಟಕಗಳ ಸದಸ್ಯರು ಉಪಸ್ಥಿತರಿದ್ದರು