-->
ಮಕ್ಕಳ ಕ್ಯಾನ್ಸರ್ ಜಾಗೃತಿ ಅಭಿಯಾನ: ಮಣಿಪಾಲ ಆಸ್ಪತ್ರೆಗೆ ಸ್ವರ್ಣ ಬಣ್ಣದ ವಿದ್ಯುತ್ ದೀಪಾಲಂಕಾರ

ಮಕ್ಕಳ ಕ್ಯಾನ್ಸರ್ ಜಾಗೃತಿ ಅಭಿಯಾನ: ಮಣಿಪಾಲ ಆಸ್ಪತ್ರೆಗೆ ಸ್ವರ್ಣ ಬಣ್ಣದ ವಿದ್ಯುತ್ ದೀಪಾಲಂಕಾರ


ಅಂತರರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ (ಕೆಎಂಸಿ) ಟೈಗರ್ ಸರ್ಕಲ್ ಪ್ರವೇಶ ದ್ವಾರ ಶನಿವಾರ ಸಂಜೆ ಸುವರ್ಣ (ಚಿನ್ನದ) ಬಣ್ಣದ ದೀಪಾಲಂಕಾರದಿಂದ ಕಂಗೊಳಿಸಿತು. ಆಕ್ಸೆಸ್ ಲೈಫ್ (Access Life) ಅಸಿಸ್ಟೆನ್ಸ್ ಫೌಂಡೇಶನ್ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಈ ವಿಶೇಷ ಕಾರ್ಯಕ್ರಮದಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಪುಟಾಣಿ ಮಕ್ಕಳಿಗೆ ಬೆಂಬಲ ಸೂಚಿಸಿದರು.


ರೋಗವನ್ನು ಆರಂಭದಲ್ಲೇ ಪತ್ತೆಹಚ್ಚುವ ಅಗತ್ಯತೆ, ಬಾಲ್ಯದ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದ ಪರಿಣಾಮಕಾರಿ ಚಿಕಿತ್ಸೆ ಮತ್ತು ಗುಣಪಡಿಸುವಿಕೆ ಕುರಿತು ಜಾಗೃತಿ ಮೂಡಿಸಲಾಯಿತು. 


ಈ ಪ್ರತಿಷ್ಠಿತ ಕಟ್ಟಡಕ್ಕೆ ಸುವರ್ಣ ದೀಪಾಲಂಕಾರ ಮಾಡಿರುವುದರ ಹಿಂದೆ ಮಹತ್ವದ ಉದ್ದೇಶವಿದೆ. ಚಿನ್ನವು ಮಕ್ಕಳ ಕ್ಯಾನ್ಸರ್ ಕುರಿತಾದ ಜಾಗೃತಿಯನ್ನು ಸೂಚಿಸುವ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಬಣ್ಣವಾಗಿದೆ. ಏಕೆಂದರೆ ಇದು ಅತ್ಯಮೂಲ್ಯವಾದ ಲೋಹವನ್ನು ಪ್ರತಿನಿಧಿಸುತ್ತದೆ ಮತ್ತು ಅಂತಹ ಲೋಹವು ಮಕ್ಕಳ ಮೌಲ್ಯಕ್ಕೆ ಸಮಾನವಾಗಿರುತ್ತದೆ. ಹಿರಿಯರಲ್ಲಿ ಬರುವ ಕ್ಯಾನ್ಸರ್‌ನಂತೆ ಮಕ್ಕಳ ಕ್ಯಾನ್ಸರ್ ಅನ್ನು ಜೀವನಶೈಲಿಯ ಬದಲಾವಣೆಗಳಿಂದ ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೇ ಇದರ ಮೊದಲ ಹೆಜ್ಜೆಯಾಗಿದೆ. ಯಾವುದೇ ಮಗುವೂ ಮುಂದುವರಿದ ವೈದ್ಯಕೀಯ ಚಿಕಿತ್ಸೆಯಿಂದ ವಂಚಿತವಾಗಬಾರದು ಮತ್ತು ಪೋಷಕರು ಆರಂಭಿಕ ರೋಗಲಕ್ಷಣಗಳನ್ನು ನಿರ್ಲಕ್ಷಿಸದೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂಬ ಸಂದೇಶವನ್ನು ಈ ದೀಪಾಲಂಕಾರದ ಮೂಲಕ ಸಾರಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೀಡಿಯಾಟ್ರಿಕ್ ಆಂಕೊಲಾಜಿ (ಮಕ್ಕಳ ಕ್ಯಾನ್ಸರ್ ಚಿಕಿತ್ಸಾ) ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾದ ಡಾ. ವಾಸುದೇವ ಭಟ್ ಕೆ ಅವರು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯುವುದರ ಮಹತ್ವವನ್ನು ವಿವರಿಸಿದರು

“ದೊಡ್ಡವರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗೆ ಹೋಲಿಸಿದರೆ ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್‌ಗಳನ್ನು ಕೇವಲ ತಪಾಸಣೆಯ (ಸ್ಕ್ರೀನಿಂಗ್) ಮೂಲಕ ಪತ್ತೆಹಚ್ಚಲು ಸಾಧ್ಯವಿಲ್ಲ; ಆದ್ದರಿಂದ, ಸಕಾಲದಲ್ಲಿ ರೋಗನಿರ್ಣಯ ಮತ್ತು ಸೂಕ್ತ ಚಿಕಿತ್ಸೆಯೇ ಅತ್ಯಂತ ಪ್ರಮುಖವಾದ ವೈದ್ಯಕೀಯ ಕ್ರಮಗಳಾಗಿವೆ. ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಂಡರೆ ಶೇಕಡಾ 80 ಕ್ಕಿಂತ ಹೆಚ್ಚು ಮಕ್ಕಳನ್ನು ಸಂಪೂರ್ಣವಾಗಿ ಗುಣಪಡಿಸಿ, ಅವರು ಆರೋಗ್ಯಕರ ಜೀವನ ನಡೆಸುವಂತೆ ಮಾಡಬಹುದು. ಆರ್ಥಿಕ ಅಥವಾ ಭೌಗೋಳಿಕ ಅಡೆತಡೆಗಳಿಂದಾಗಿ ಯಾವುದೇ ಮಗು ಮುಂದುವರಿದ ಚಿಕಿತ್ಸೆಯಿಂದ ವಂಚಿತವಾಗಬಾರದು ಎಂಬುದು ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್ ಜೊತೆಗಿನ ನಮ್ಮ ಸಹಯೋಗದ ಮುಖ್ಯ ಉದ್ದೇಶವಾಗಿದೆ.”

ದೂರದ ಊರುಗಳಿಂದ ಬರುವ ಬಡ ಕುಟುಂಬಗಳಿಗೆ ಆಸ್ಪತ್ರೆಯ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಶುಚಿಯಾದ ವಸತಿ, ಪೌಷ್ಟಿಕ ಆಹಾರ ಮತ್ತು ಮಾನಸಿಕ ಬೆಂಬಲವನ್ನು ಒದಗಿಸುವುದು ಚಿಕಿತ್ಸೆಯಷ್ಟೇ ಮುಖ್ಯ ಎಂದು ಆಕ್ಸೆಸ್ ಲೈಫ್ ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರೂ ಗೋಲ್ಡ್ ರಿಬ್ಬನ್ ಧರಿಸುವ ಮೂಲಕ ಮಕ್ಕಳ ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವುದಾಗಿ ಸಂಕಲ್ಪ ಮಾಡಿದರು.

Ads on article

Advertise in articles 1

advertising articles 2

Advertise under the article