ಜಗತ್ತಿಗೆ ಪ್ರಬುದ್ಧ ಚಿಂತನೆಯನ್ನು ನೀಡಿದವರು ಡಾ. ಬಿ. ಆರ್ ಅಂಬೇಡ್ಕರ್: ಡಾ. ಗಣನಾಥ ಎಕ್ಕಾರು d
ಡಾ. ಬಿ ಆರ್ ಅಂಬೇಡ್ಕರ್ ತಮ್ಮ ಜೀವನದ ಪ್ರತಿ ಹಂತದಲ್ಲಿ ಅಸಮಾನತೆ ಯನ್ನು ಎದುರಿಸಿದವರು. ಅವರ ಪ್ರಬುದ್ಧ ಚಿಂತನೆಯ ಮೂಲಕ ಸಂವಿಧಾನ ವನ್ನು ರಚಿಸಿ ದೇಶದ ಪ್ರಜಾಪ್ರಭುತ್ವ ಕ್ಕೆ ಭದ್ರ ಅಡಿಪಾಯವನ್ನು ಹಾಕಿದರು ಎಂದು ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಹೇಳಿದರು.
ಅವರು ಶುಕ್ರವಾರ ಸರಕಾರಿ ಪದವಿ ಪೂರ್ವ ಕಾಲೇಜು (ಕೆ.ಪಿ.ಎಸ್.) ಪಡುಬಿದ್ರಿ ಇಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲೆ ವತಿಯಿಂದ ನಡೆದ
ಡಾ. ಬಿ. ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಕುರಿತು ಓದುವಿಕೆ ಚಿಂತನೆಯನ್ನು ಬದಲಾಯಿಸುತ್ತದೆ. ಜ್ಞಾನವನ್ನು ವೃದ್ಧಿಸುತ್ತದೆ. ಸಂವಿದಾನದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಂಗಳೂರು ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಭಾಸ್ಕರ್ ವಿಟ್ಲ ಉಪನ್ಯಾಸ ನೀಡಿ ಮಾತನಾಡಿ, ಸಂವಿಧಾನ ದ ಮೂಲಕ ಹೆಣ್ಣು ಮಕ್ಕಳಿಗೆ ಗೌರವ ಸ್ವತಂತ್ರ ಸಮಾನತೆ ಒದಗಿಸಿದವರು ಡಾ. ಬಿ ಆರ್. ಅಂಬೇಡ್ಕರ್. ಸಂವಿಧಾನ ದಂತೆ ಇಂದಿನ ಪೀಳಿಗೆಯು ಮಹಿಳೆಯರಿಗೆ ಸಮಾನ ಅವಕಾಶ ಗೌರವ ಸ್ವತಂತ್ರ ನೀಡಬೇಕು ಎಂದರು.
ಪಡುಬಿದ್ರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಡಾ. ಸುಮಾ ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಹೇಮಚಂದ್ರ ಸಾಲಿಯಾನ, ಕೆ.ಪಿ.ಎಸ್., ಪಡುಬಿದ್ರಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಬಂಗೇರ, ಪ್ರೌಢಶಾಲಾ ವಿಭಾಗ ಹಿರಿಯ ಸಹಶಿಕ್ಷಕಿ ಸರಿಟ ಡಿ'ಸೋಜಾ, ಪ್ರಾಥಮಿಕ ವಿಭಾಗ ಮುಖ್ಯೋಪಾಧ್ಯಾಯಿನಿ ಶೈಲಜಾ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಾಲೆಯ ಶಿಕ್ಷಕಿ ಸುಜಾತಾ ನಿರೂಪಿಸಿ, ಅಜಯ್ ವಂದಿಸಿದರು.