
Udupi: ಪೋಷಕರಿಲ್ಲದೇ ದೇಶೀಯ ಕಲಾ ಪ್ರಕಾರಗಳ ಅವನತಿ; ಡಾ. ಪುರುಷೋತ್ತಮ ಬಿಳಿಮಲೆ ಕಳವಳ
ಯಕ್ಷಗಾನ ಕಲೆಯ ಬೆಂಬಲಕ್ಕೆ ಡಾ. ಶಿವರಾಮ ಕಾರಂತರ0ತಹ ವಿದ್ವಾಂಸರು ದೊರೆತಂತೆ, ದೇಶದ ವಿವಿಧ ಭಾಗಗಗಳಲ್ಲಿ ಇತರ ಕಲೆಗಳಿಗೆ ಪೋಷಕರು ದೊರೆಯದ ಕಾರಣ ಹಲವಾರು ದೇಶೀಯ ಕಲಾ ಪ್ರಕಾರಗಳು ಅವನತಿ ಹೊಂದಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಹೇಳಿದರು.
ಅವರು ಮಂಗಳವಾರ ಡಾ. ಶಿವರಾಮ ಕಾರಂತ ಟ್ರಸ್ಟ್ ಹಾಗೂ ರಥಬೀದಿ ಗೆಳೆಯರು, ಉಡುಪಿ ಆಶ್ರಯದಲ್ಲಿ ನಡೆದ 'ಅರಿವಿನ ಬೆಳಕು ಉಪನ್ಯಾಸ ಮಾಲಿಕೆ'ಯಡಿ "ಡಾ. ಶಿವರಾಮ ಕಾರಂತರ ಬದುಕು ಮತ್ತು ಬರಹಗಳ ಪ್ರಸ್ತುತತೆ ಕುರಿತು ಮಾತನಾಡಿದರು. ಯಾವುದೇ ಒಂದು ಕಲಾ ಕ್ಷೇತ್ರಕ್ಕೆ ವಿದ್ಯಾವಂತರ ಪ್ರವೇಶವಾದರೆ ಆ ಕಲೆ ಉಳಿಯುತ್ತದೆ, ಬೆಳೆಯುತ್ತದೆ ಎಂದರು.
ಕಾರಂತರ ಚೋಮನ ದುಡಿ ಗ್ರಂಥದ ಬಗ್ಗೆ ಪ್ರಸ್ತಾಪಿಸಿದ ಬಿಳಿಮಲೆ ಅವರು, "ಯಾವ ಚೋಮನಿಗೆ ನೆಲೆಸಲು ಜಮೀನು ಸಿಗಬೇಕು ಎಂದು ಕಾರಂತರು ಆಸೆಪಟ್ಟರೋ, ಆ ಚೋಮನಿಗೆ ಸಿಕ್ಕಿದ ಜಮೀನು ಮತ್ತೆ ಕಳೆದುಕೊಳ್ಳುತ್ತಿದ್ದಾನೆ ಎಂಬ ಸತ್ಯವನ್ನು ನಾವು ಅರಿಯಬೇಕಿದೆ ಎಂದರು.
ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ರಥಬೀದಿ ಗೆಳೆಯರು ಅಧ್ಯಕ್ಷ ನಾಗೇಶ್ ಕುಮಾರ್ ಉದ್ಯಾವರ, ಭಾಷಾ ವಿದ್ವಾಂಸ ಡಾ. ಕೆ.ಪಿ. ರಾವ್, ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ, ಡಾ. ನಿಕೇತನ ಮತ್ತಿತರರಿದ್ದರು.
--------------------------