ಆದಿವುಡುಪಿ ಶಾಲೆಯಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮ
ಯುವಬಂಟರ ಸಂಘ ಕಂಬಳಕಟ್ಟ -ಕೊಡವೂರು , ಜೆಎಸ್ ಡಬ್ಲ್ಯೂ ಫೌಂಡೇಶನ್ ಮಂಗಳೂರು, ಲಯನ್ಸ್ ಕ್ಲಬ್ ಉಡುಪಿ-ಚೇತನ ಹಾಗೂ ಆದಿವುಡುಪಿ ಹಿರಿಯ ಪ್ರಾಥಮಿಕ ಶಾಲೆ ಇವರುಗಳ ಆಶ್ರಯದಲ್ಲಿ ಇಂಡಿಯಾ ವಿಷನ್ ಇನ್ಸ್ಟಿಟ್ಯೂಟ್ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮವು ಆದಿವುಡುಪಿ ಶಾಲೆಯಲ್ಲಿ ಜರುಗಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಾವು ನಮ್ಮ ವಾಹನದ ತಪಾಸಣೆಯನ್ನು ಕ್ರಮಬದ್ದವಾಗಿ ಮಾಡುವ ರೀತಿ ದೇಹವೆಂಬ ವಾಹನಕ್ಕೆ ನಿಯಮಿತವಾದ ತಪಾಸಣೆಯ ಅಗತ್ಯತೆ ಇದೆ. ಅದರ ಭಾಗವಾಗಿ ಈ ಕಣ್ಣಿನ ಪರೀಕ್ಷೆಯು ಪ್ರಮುಖ ಪಾತ್ರವಹಿಸುತ್ತದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಆಯೋಜಕರಿಗೆ ಅಭಿನಂದನೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿರಲಿ ಎಂದು ಶುಭಹಾರೈಸಿದರು.
ಈ ಕಾರ್ಯಕ್ರಮದಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಅಮೋಘ್ ಎಸ್. ರಾವ್ ಕಂಬಳಕಟ್ಟ ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಸುಮಾರು 150ಕ್ಕೂ ಅಧಿಕ ಶಿಭಿರಾರ್ಥಿಗಳು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಗಳಿಗೆ ಉಚಿತ ಕನ್ನಡಕ ವಿತರಿಸಲಾಯಿತು.
ಯುವಬಂಟರ ಸಂಘ(ರಿ.) ಕಂಬಳಕಟ್ಟ -ಕೊಡವೂರು ಇದರ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ.ಕೆ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಜೆ ಎಸ್ ಡಬ್ಲ್ಯೂ ಮಂಗಳೂರು ಇದರ ವ್ಯಾಪಾರ ಅಭಿವೃದ್ಧಿ ಮಾರ್ಕೆಟಿಂಗ್ ಜನರಲ್ ಮ್ಯಾನೇಜರ್ ದಿಲೀಪ್ ಶೆಟ್ಟಿ ,ಉಪ ವ್ಯವಸ್ಥಾಪಕ ಪ್ರದೀಪ್ ಕೆ.ಆರ್, ಜಿಲ್ಲೆ 317 ಸಿ ಪ್ರಾಂತ್ಯ-2 ಇದರ ಲಯನ್ ಪ್ರಾಂತ್ಯ ಅಧ್ಯಕ್ಷ ಎಂಜೆಎಫ್ ಅರುಣ್ ಕುಮಾರ್ ಶೆಟ್ಟಿ, ಆದಿವುಡುಪಿ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಟಿ.ಕೆ. ಗಣೇಶ್ ರಾವ್ ,ಲಯನ್ಸ್ ಕ್ಲಬ್ ಉಡುಪಿ-ಚೇತನದ ಅಧ್ಯಕ್ಷ ಸಂತೋಷ್ ಶೆಟ್ಟಿ ಪಂಚರತ್ನ, ಇಂಡಿಯಾ ವಿಷನ್ ಸಂಸ್ಥೆಯ ವೈದ್ಯೆ ಡಾ. ಶಿಲ್ಪಾ, ಡಾ. ಸ್ವಾತಿ, ಯುವಬಂಟರ ಸಂಘ ಕಂಬಳಕಟ್ಟ -ಕೊಡವೂರು ಇದರ ಗೌರವಾಧ್ಯಕ್ಷೆ ಅಶ್ವಿನಿ ಶೆಟ್ಟಿ ಸಂತೆಕಟ್ಟೆ ಉಪಸ್ಥಿತರಿದ್ದರು.
ಸೌಮ್ಯ ಶೆಟ್ಟಿ ಗರ್ಡೆ ಪ್ರಾರ್ಥಿಸಿದರು. ಪುಷ್ಪರಾಜ್ ಶೆಟ್ಟಿ.ಕೆ ಆದಿವುಡುಪಿ ಸ್ವಾಗತಿಸಿ, ಸುರೇಶ್ ಶೆಟ್ಟಿ ಕಂಬಳಕಟ್ಟ ವಂದಿಸಿದರು. ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.