ಮಣಿಪಾಲ ಮನೆಗಳ್ಳತನ ಪ್ರಕರಣ; 12 ಗಂಟೆಯೊಳಗೆ ಕಳ್ಳರ ಬಂಧನ
ಮಣಿಪಾಲ ಠಾಣಾ ವ್ಯಾಪ್ತಿಯ 80 ಬಡಗುಬೆಟ್ಟು ಗ್ರಾಮದ ಶಾಂತಿನಗರ ಎಂಬಲ್ಲಿ ನಡೆದ ಮನೆಗಳ್ಳತನ ಪ್ರಕರಣವನ್ನು 12 ಗಂಟೆಯ ಒಳಗಡೆ ಭೇದಿಸುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಲತಃ ವಿಜಯಪುರ ಮುದ್ದೆಬಿಹಾಳದ, ಪ್ರಸ್ತುತ ಉಡುಪಿಯ ಹನುಮಂತನಗರದಲ್ಲಿ ವಾಸವಿರುವ ಸಂತೋಷ(20), ಬಡನಿಡಿಯೂರು ಹಂಪನಕಟ್ಟ ನಿವಾಸಿ ಚಿರಂತನ (21) ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ವಶಕ್ಕೆ ಪಡೆಯಲಾಗಿದೆ.
ಮಾರ್ಚ್ 12ರಂದು ಶಾಂತಿನಗರ ನಿವಾಸಿ ಸಂಗೀತ ಮಡಿವಾಳ ಎಂಬವರ ಮನೆಯಲ್ಲಿ ಹಾಡು ಹಗಲೇ ಕಳ್ಳತನ ನಡೆದಿತ್ತು. ಮನೆಯ ಹಂಚು ತೆಗೆದು ಒಳ ಪ್ರವೇಶಿಸಿದ ಕಳ್ಳರು ಕಪಾಟಿನಲ್ಲಿಟ್ಟಿದ್ದ ಚಿನ್ನ ಬೆಳ್ಳಿ ಆಭರಣಗಳನ್ನು ಕಳವು ಮಾಡಿದರು. ಸುಮಾರು ನಾಲ್ಕು ಲಕ್ಷದ ನಲವತ್ತೇಳು ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವಾಗಿತ್ತು. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಡುಪಿ ಜಿಲ್ಲಾ ಎಸ್ ಪಿ ಹರಿರಾಮ ಶಂಕರ್ ಅವರ ಆದೇಶದಂತೆ ಮಣಿಪಾಲ ಠಾಣಾ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪಿಎಸ್ಐ ತಿಮ್ಮೇಶ್ ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಗಳಾದ ವಿಶ್ವಜಿತ್ ಬೆಳ್ಳೆ, ಮಹಮ್ಮದ್ ಅಜ್ಮಲ್ ಹೈಕಾಡಿ, ಚೇತನ್ ಎಸ್ ಹಾಗೂ ರವಿರಾಜ್ ಅವರನ್ನು ಒಳಗೊಂಡ ವಿಶೇಷ ತಂಡವು ಆರೋಪಿಗಳನ್ನು ಶಿವಳ್ಳಿ ಗ್ರಾಮದ ಸಿಮ್ರಾ ಬ್ರಿಡ್ಜ್ ಬಳಿ ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ 4,47,000 ಮೌಲ್ಯದ ಚಿನ್ನ ಬೆಳ್ಳಿಯ ಆಭರಣಗಳು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಎಸ್ ಪಿ ಹರಿರಾಮ ಶಂಕರ್ ಅವರ ನಿರ್ದೇಶನದಂತೆ ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್ , ಡಿವೈಎಸ್ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಮಣಿಪಾಲ ಠಾಣಾ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪಿಎಸ್ಐ ತಿಮ್ಮೇಶ್ ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಗಳಾದ ವಿಶ್ವಜಿತ್ ಬೆಳ್ಳೆ, ಮಹಮ್ಮದ್ ಅಜ್ಮಲ್ ಹೈಕಾಡಿ, ಚೇತನ್ ಎಸ್ ಹಾಗೂ ರವಿರಾಜ್, ಠಾಣಾ ತನಿಖಾ ಸಹಾಯಕ ಸುರೇಶ್ ಶೆಟ್ಟಿ ಸುಕುಮಾರ ಶೆಟ್ಟಿ , ಜೀಪು ಚಾಲಕ ಸಲೀಂ , ಸತೀಶ ಹಾಗೂ ಉಡುಪಿ ಸಿಡಿ ಆರ್ ವಿಭಾಗದ ದಿನೇಶ್ ಹಾಗೂ ನಿತಿನ್ ಪಾಲ್ಗೊಂಡಿದ್ದರು.