ಉಡುಪಿಯ ಹೊಟೇಲ್ಗಳಿಗೆ ತಟ್ಟಿದ ಗ್ಯಾಸ್ ಬಿಸಿ; ಬಹುತೇಕ ಕ್ಯಾಂಟೀನ್ಗಳು ಬಂದ್
ದೇಶಾದ್ಯಂತ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ಉಂಟಾಗಿರುವ ವ್ಯತ್ಯಯದ ಬಿಸಿ ಉಡುಪಿ ಜಿಲ್ಲೆಗೂ ತಟ್ಟಿದೆ. ಉಡುಪಿಯ ಬಹುತೇಕ ಸಣ್ಣ ಹೋಟೇಲ್ ಉದ್ದಿಮೆಗಳಿಗೆ ಭಾರೀ ಹೊಡೆತ ಬಿದ್ದಿದ್ದು, ಹಲವು ಕ್ಯಾಂಟೀನ್ ಗಳು ಮಾರ್ಚ್ 11ರ ಮದ್ಯಾಹ್ನದಿಂದಲೇ ಬಂದ್ ಆಗಿವೆ
ಉಡುಪಿಯ ಗ್ಯಾಸ್ ಏಜೆನ್ಸಿಗಳಿಗೆ ಮಾರ್ಚ್ 7ರಂದು ಗ್ಯಾಸ್ ಪೂರೈಕೆಯಾಗಿದೆ. ಅದೂ ಕೂಡಾ ಬೇಡಿಕೆ ಇಟ್ಟ ಅರ್ಧದಷ್ಟೇ ಪೂರೈಕೆಯಾಗಿದ್ದು, ಅದನ್ನು ಕೇವಲ ತೀರಾ ಅವಶ್ಯಕತೆ ಇರುವ ಗ್ರಾಹಕರಿಗಷ್ಟೇ ನೀಡಲಾಗಿದೆ. ಮಂಗಳೂರು ಫಿಲ್ಲಿಂಗ್ ಪ್ಲಾಂಟ್ನಿಂದ ಉಡುಪಿಯ ಏಜೆನ್ಸಿಗಳಿಗೆ ಬರುತ್ತಿದ್ದ ಪೂರೈಕೆಯಲ್ಲಿ ಶೇ. 90ರಷ್ಟು ಕಡಿತವಾಗಿದೆ. ಹೀಗಾಗಿ ಸಣ್ಣ ಹೊಟೇಲ್ ಉದ್ದಿಮೆ ಮಾಡಿಕೊಂಡಿರುವವರಿಗೆ ಗ್ಯಾಸ್ ಪೂರೈಕೆಯಾಗದೇ ಹೊಟೇಲ್ ಬಂದ್ ಮಾಡುವ ಪರಿಸ್ಥಿತಿ ಬಂದೊದಗಿದೆ. ಉಡುಪಿಯ ಬಹುತೇಕ ಏಜೆನ್ಸಿಗಳಿಗೆ ಗ್ಯಾಸ್ ಸಿಲಿಂಡರ್ ಪೂರೈಕೆಯಾಗದೇ ಇರುವುದರಿಂದ ಗ್ಯಾಸ್ ಸಾಗಾಟ ವಾಹನ ರಸ್ತೆಗಿಳಿದಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ನಾಳೆಯಿಂದ ಸಣ್ಣ ಹೊಟೇಲ್ ಉದ್ದಿಮೆದಾರರು ಹೊಟೇಲ್ ಬಂದ್ ಮಾಡುವ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಹೊಟೇಲ್ ಉದ್ಯಮಿ ಶಿವಪ್ರಸಾದ್ ಶೆಟ್ಟಿ ತಲ್ಲೂರು.
ಇನ್ನು ದಿನ ಬಳಕೆಯ ಗ್ಯಾಸ್ನಲ್ಲೂ ವ್ಯತ್ಯಯ ಉಂಟಾಗಿದ್ದು, ಎರಡು ಸಿಲಿಂಡರ್ ಹೊಂದಿದ ಬಳಕೆದಾರರು ಒಂದು ಗ್ಯಾಸ್ ಬುಕ್ ಮಾಡಿ 25 ದಿನದೊಳಗಡೆ ಮತ್ತೊಮ್ಮೆ ಗ್ಯಾಸ್ ಬುಕ್ ಮಾಡುವಂತಿಲ್ಲ. 2 ಸಿಲಿಂಡರ್ ಹೊಂದಿದ ಬಳಕೆದಾರರು 35 ದಿನದೊಳಗಡೆ ಇನ್ನೊಂದು ಗ್ಯಾಸ್ ಬುಕ್ ಮಾಡುವಂತಿಲ್ಲ ಎನ್ನುವ ನಿಯಮವನ್ನು ಕೂಡಾ ತಂದಿದ್ದಾರೆ.
ತೀರಾ ಅವಶ್ಯಕ ಸೇವೆಗಳಾದ ಆಸ್ಪತ್ರೆ, ಶಾಲೆಗಳಿಗೆ ಮಾತ್ರ ಗ್ಯಾಸ್ ಪೂರೈಕೆ ಮಾಡಲು ಸೂಚಿಸಿರುವುದರಿಂದ ಇಲ್ಲಿವರೆಗೆ ಉಡುಪಿಯ ಸರ್ಕಾರಿ ಶಾಲೆಯ ಬಿಸಿಯೂಟದ ವ್ಯವಸ್ಥೆಗೆ ಇಲ್ಲಿವರೆಗೆ ಯಾವುದೇ ತೊಂದರೆಯಾಗಿಲ್ಲ ಎನ್ನುತ್ತಾರೆ ಒಳಕಾಡು ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯಿನಿ ಪೂರ್ಣೀಮಾ ಅವರು.
ಗ್ಯಾಸ್ ಅಭಾವದ ಹಿನ್ನೆಲೆಯಲ್ಲಿ ಹೊಟೇಲ್ ಉದ್ದಿಮೆದಾರರು ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದು, ಇಂಡಕ್ಷನ್ ಸ್ಟವ್ ಹಾಗೂ ಕಟ್ಟಿಗೆ ಒಲೆಯ ಮೊರೆ ಹೋಗಿದ್ದಾರೆ.
ಕಳೆದ ಮೂರು ದಿನಗಳಿಂದ ಗ್ಯಾಸ್ ಪೂರೈಕೆಯಾಗದೇ ಇರುವುದನ್ನು ಮನಗಂಡ ಹೊಟೇಲ್ ಉದ್ದಿಮೆದಾರರು ಸೌದೆ ಒಲೆಯಲ್ಲಿ ಅಡುಗೆ ಮಾಡಲು ಮುಂದಾಗಿದ್ದಾರೆ. ಉಡುಪಿಯ ಕೆಲವು ಕ್ಯಾಟರಿಂಗ್ ಮಾಲಕರು ಆರ್ಡರ್ಗಳನ್ನು ಪಡೆದುಕೊಂಡಿದ್ದು, ಸಿಲಿಂಡರ್ ವ್ಯತ್ಯಯದಿಂದಾಗಿ ಸಮಸ್ಯೆ ತಲೆದೋರಿದೆ. ಹೀಗಾಗಿ ಗ್ರಾಹಕರಿಗೆ ಸೇವೆ ಒದಗಿಸಿಲು ಸೌದೆ ಒಲೆಯ ಮೊರೆ ಹೋಗಿದ್ದಾರೆ.
ಸಿಲಿಂಡರ್ ಪೂರೈಕೆ ಶೀಘ್ರವೇ ಸಹಜ ಸ್ಥಿತಿಗೆ ಬರದಿದ್ದರೆ ಉಡುಪಿ ಜಿಲ್ಲೆಯ ಅನೇಕ ಸಣ್ಣ ಮತ್ತು ಮಧ್ಯಮ ಹಂತದ ಹೋಟೆಲ್ಗಳಿಗೆ ತಾತ್ಕಾಲಿಕ ಬೀಗ ಮುದ್ರೆ ಬೀಳಲಿದೆ. ಉಡುಪಿಯ ರಥಬೀದಿಯಲ್ಲಿರುವ ಆಚಾರ್ಯದರ್ಶಿನಿ ಹೊಟೇಲ್ ಸಹಿತ ಕೆಲವೊಂದು ಸಣ್ಣಪುಟ್ಟ ಕ್ಯಾಂಟೀನ್ಗಳು ಮಾ. 11ರ ಮದ್ಯಾಹ್ನದಿಂದಲೇ ಮುಚ್ಚಿವೆ. ಹೀಗಾಗಿ ಹೋಟೇಲ್ ಊಟವನ್ನೇ ಅವಲಂಬಿಸಿರುವ ಜನರಿಗಂತೂ ಸಂಕಷ್ಟ ಬಂದೊದಗಿದೆ.
